
ಬೆಂಗಳೂರು(ಅ.25): ಸದ್ಯ ಬೆಂಗಳೂರಲ್ಲಿ ಸದ್ದು ಮಾಡ್ತಿರೋ ಯೋಜನೆ ಎಂದರೆ ಸ್ಟೀಲ್ ಬ್ರಿಡ್ಜ್. ವ್ಯಾಪಕ ವಿರೋಧದ ನಡುವೆಯೂ ಬಿಡಿಎ ಈ ಮೇಲ್ಸುತುವೆ ನಿರ್ಮಾಣಕ್ಕೆ ಮುಂದಾಗಿದೆ. ಈ ನಡುವೆ ಬಿಡಿಎ ಸಾರ್ವಜನಿಕರ ಲಕ್ಷ ಲಕ್ಷ ಹಣ ದುಂದು ವೆಚ್ಚ ಮಾಡಿ ಉಕ್ಕಿನ ಮೇಲ್ಸೇತುವೆಯ ತ್ರೀಡಿ ಅನಿಮೇಷನ್ ಬಿಡುಗಡೆ ಮಾಡಿದೆ. ಆದರೆ ಈ ತ್ರೀಡಿ ಅನಿಮೇಷನ್'ನಲ್ಲಿ ನೋಡಿದರೆ ಬಿಡಿಎ ಜನರಿಗೆ ಹಗಲಲ್ಲೇ ನಕ್ಷತ್ರ ತೋರಿದಂತಿದೆ.
ಸ್ಟೀಲ್ ಬ್ರಿಡ್ಜ್ , ಬಿಡಿಎ ಕೈಗೆತ್ತಿಕೊಂಡಿರುವ ಬಹುಕೋಟಿ ವೆಚ್ಚದ ಅತೀ ದೊಡ್ಡ ಯೋಜನೆ. ಆದರೆ ಈ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಬಿಡಿಎ ಉಕ್ಕಿನ ಮೇಲ್ಸೇತುವೆಯ ತ್ರೀಡಿ ಅನಿಮೇಷನ್ ವಿಡಿಯೋ ಬಿಡುಗಡೆ ಮಾಡಿದೆ. ಆದರೆ ಈ ವಿಡಿಯೋದಲ್ಲಿ ಉಕ್ಕಿನ ಮೇಲ್ಸೇತುವೆ ಬಗ್ಗೆ ಪೂರ್ಣ ಮಾಹಿತಿ ತೋರಿಸಿಲ್ಲ. ಅನೇಕ ಲೋಪಗಳಿವೆ. ಬಸವೇಶ್ವರ ವೃತ್ತದಲ್ಲಂತೂ ಅನೇಕ ಡೌನ್ ರ್ಯಾಂಪ್, ಅಪ್ರ್ಯಾಂಪ್, ಅಂಡರ್ಬ್ರಿಡ್ಜ್ ಅಂತೆಲ್ಲ ಸಿಕ್ಕಾಪಟ್ಟೆ ಗೊಂದಲ ಮಾಡಲಾಗಿದೆ.
ಗಂಭೀರ ವಿಚಾರವೆಂದರೆ ಉಕ್ಕಿನ ಮೇಲ್ಸೇತುವೆಯಿಂದ ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ವಾಯುಪಡೆ ತರಬೇತಿ ಕೇಂದ್ರಗಳು ಸುಲಭವಾಗಿ ಉಗ್ರರ ಕಣ್ಣಿಗೆ ಬೀಳಲಿವೆ. ಯಾಕೆಂದರೆ ಈ ಎರಡೂ ಕಟ್ಟಡಗಳು ಕಾಣುವ ಹಾಗೆ ಉಕ್ಕಿನ ಮೇಲ್ಸೇತುವೆ ನೆಲಮಟ್ಟದಿಂದ 68 ಅಡಿ ಎತ್ತರದಲ್ಲಿ ನಿರ್ಮಾಣವಾಗಲಿದೆ
ಇನ್ನು ಉಕ್ಕಿನ ಮೇಲ್ಸೇತುವೆಯಿಂದ 812 ಮರಗಳು ಬಲಿಯಾಗುತ್ತವೆ. ಆದರೆ ತ್ರೀಡಿ ಅನಿಮೇಷನ್ನಲ್ಲಿ ಉಕ್ಕಿನ ಮೇಲ್ಸೇತುವೆ ಉದ್ದಕ್ಕೂ ಹಸಿರು ಮರಗಳನ್ನು ಇಟ್ಟು ಜನರ ಕಿವಿಗೆ ಹೂವು ಮುಡಿಸಲು ಮುಂದಾಗಿದ್ದಾರೆ..
ಇನ್ನು ಉಕ್ಕಿನ ಸೇತುವೆಗಿಂತ ಕಾಂಕ್ರೀಟ್ ಸೇತುವೆ ಹಾಗೂ ಮೆಟ್ರೋ ರೈಲು ಯೋಜನೆಗಳೇ ಮೇಲು. ಅಲ್ಲದೇ ವೆಚ್ಚವೂ ಹತ್ತುಪಟ್ಟು ಕಡಿಮೆಯಾಗಲಿದೆ. ಭವಿಷ್ಯದಲ್ಲಿ ನಿರ್ವಹಣೆಯೂ ಕಡಿಮೆ.
ಉಕ್ಕಿನ ಸೇತುವೆ ವರ್ಸಸ್ ಕಾಂಕ್ರೀಟ್ ಸೇತುವೆ
ಸರ್ಕಾರ ನಿರ್ಮಿಸಲು ಹೊರಟಿರುವ ಸೇತುವೆ ಯಾಕೆ ದುಬಾರಿ ಎನ್ನುವುದಕ್ಕೆ ಈ ಅಂಕಿ ಅಂಶಗಳೇ ಉದಾಹರಣೆ. 1791 ಕೋಟಿ ರೂ ವೆಚ್ಚದ ದುಬಾರಿ ಯೋಜನೆಯಲ್ಲಿ ಒಂದು ಕಿ.ಮೀ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ 267 ಕೋಟಿ ಖರ್ಚಾಗಲಿದೆ. ಇದೇ ಜಾಗದಲ್ಲಿ ಕಾಂಕ್ರಿಟ್ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಅದಕ್ಕೆ ತಗುಲುವ ವೆಚ್ಚ ಕಿ.ಮೀ ಗೆ ಕೇವಲ 30 ಕೋಟಿ. ಇನ್ನು ಮೆಟ್ರೋ ರೈಲು ನಿರ್ಮಾಣಕ್ಕೆ 1 ಕಿ.ಮೀ ಗೆ 200 ಕೋಟಿ ಆಗಲಿದೆ. ಇಷ್ಟಿದ್ದರೂ ಸರಕಾರ ಯಾಕೆ ಈ ದುಬಾರಿ ಯೋಜನೆಗೆ ಅಂಟಿಕೊಂಡಿದೆ ಎಂಬುದಕ್ಕೆ ಮಾತ್ರ ಉತ್ತರವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.