ತೊಗರಿ ಬೇಳೆಗೆ ಬೋನಸ್ ನೀಡಲು ಸರ್ಕಾರ ನಿರ್ಧಾರ

Published : Dec 27, 2016, 03:34 PM ISTUpdated : Apr 11, 2018, 12:41 PM IST
ತೊಗರಿ ಬೇಳೆಗೆ ಬೋನಸ್ ನೀಡಲು ಸರ್ಕಾರ ನಿರ್ಧಾರ

ಸಾರಾಂಶ

ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ತೊಗರಿ ಬೆಳೆಗಾರರಿಗೆ ನೆರವು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಸದ್ಯದ 5,050 ರು.ಗಳ ಬೆಲೆಗೆ 450 ರೂಗಳ ಬೋನಸ್ ನೀಡಲು ನಿರ್ಧರಿಸಿದೆ. ಹೀಗಾಗಿ ಇನ್ನು ಮುಂದೆ ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್ ತೊಗರಿಗೆ 5,500 ರೂ ದರ ದೊರಕಲಿದೆ.

ಬೆಂಗಳೂರು (ಡಿ. 27): ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ತೊಗರಿ ಬೆಳೆಗಾರರಿಗೆ ನೆರವು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಸದ್ಯದ 5,050 ರು.ಗಳ ಬೆಲೆಗೆ 450 ರೂಗಳ ಬೋನಸ್ ನೀಡಲು ನಿರ್ಧರಿಸಿದೆ. ಹೀಗಾಗಿ ಇನ್ನು ಮುಂದೆ ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್ ತೊಗರಿಗೆ 5,500 ರೂ ದರ ದೊರಕಲಿದೆ.

ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಭೆ ಬಳಿಕ ಕಾನೂನು ಸಚಿವ ಟಿ.ಬಿ.ಜಯಚಂದ್ರ ಸುದ್ದಿಗಾರರಿಗೆ ವಿವರ ನೀಡಿದರು. ಕೇಂದ್ರ ಸರ್ಕಾರ ಈಗಾಗಲೇ ನೀಡುತ್ತಿರುವ 450 ರೂ. ಬೆಂಬಲ ಬೆಲೆ ಸೇರಿದಂತೆ ಕ್ವಿಂಟಾಲ್‌ಗೆ 5,050 ರು. ದರ ನಿಗದಿಯಾಗಿತ್ತು. ಇದೀಗ ಬೋನಸ್ ಸೇರಿದಂತೆ ಕ್ವಿಂಟಾಲ್‌ಗೆ 5,500 ರು. ದೊರಕಲಿದೆ ಎಂದು ಅವರು ತಿಳಿಸಿದರು.

ಭಾರತೀಯ ಆಹಾರ ನಿಗಮ (ಎಫ್‌ಸಿಐ) ಹಾಗೂ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಂಡಳಿ (ನಫೆಡ್)ಗಳು ಖರೀದಿ ಕೇಂದ್ರ ಆರಂಭಿಸಲಿದ್ದು, ಕ್ವಿಂಟಾಲ್‌ಗೆ 5,050 ರು. ದರದಲ್ಲಿ ಖರೀದಿಸಲಿವೆ. ರಾಜ್ಯ ಸರ್ಕಾರ ಇದಕ್ಕೆ ಹೆಚ್ಚುವರಿಯಾಗಿ 450 ರೂ ಪಾವತಿಸಲಿದೆ. ಅಲ್ಲದೇ ಪಡಿತರ ವ್ಯವಸ್ಥೆ ಮೂಲಕ ತೊಗರಿ ವಿತರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿರುವುದರಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೂ ತೊಗರಿ ಖರೀದಿಸುವಂತೆ ಸೂಚಿಸಲಾಗಿದೆ. ಹೀಗೆ ವಿವಿಧ ಸಂಸ್ಥೆಗಳ ಮೂಲಕ ಖರೀದಿಸುವ ತೊಗರಿಗೆ ರಾಜ್ಯ ಸರ್ಕಾರ ಬೋನಸ್ ನೀಡುವುದರಿಂದ ಬೊಕ್ಕಸಕ್ಕೆ 100 ಕೋಟಿ ರೂ. ಹೊರೆಯಾಗಲಿದೆ ಎಂದು ಹೇಳಿದರು.

ಕೆರೆ ತುಂಬುವ ಯೋಜನೆಗಳಿಗೆ ಹಸಿರು ನಿಶಾನೆ

ಈವರೆಗೆ ಕೇವಲ ಜಲ ವಿದ್ಯುತ್ ಉತ್ಪಾದನೆಗೆ ಸೀಮಿತವಾಗಿದ್ದ ಕಾಳಿ ನದಿಯ ಸೂಪಾ ಅಣೆಕಟ್ಟೆಯ ನೀರನ್ನು ಇದೇ ಮೊದಲ ಬಾರಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸುವ ಮಹತ್ವದ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಕರ್ನಾಟಕ ವಿದ್ಯುತ್ ನಿಮಗದ ಶಿಫಾರಸಿನಂತೆ ಸೂಪಾ ಅಣೆಕಟ್ಟೆಯಿಂದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕೆರೆ ಮತ್ತು ಬಾಂದಾರಗಳಿಗೆ 0.812 ಟಿಎಂಸಿ ನೀರನ್ನು ತುಂಬುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ವಿದ್ಯುತ್ ಉತ್ಪಾದನೆಗೆ ಧಕ್ಕೆ ಆಗದ ರೀತಿಯಲ್ಲಿ ನೀರಿನ ಲಭ್ಯತೆ ಅನುಸರಿಸಿ, ಒಂದು ಬಾರಿ ಮಾತ್ರ ಅನ್ವಯ ಆಗುವಂತೆ ಕೆರೆ ತುಂಬುವ ಯೋಜನೆಗೆ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ.

ಇದಲ್ಲದೇ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯನ್ನು 41,568 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ 121 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪುಗೊಳ್ಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Maruti Swift vs Hyundai i20 Car: ಮಾರುತಿ, ಹುಂಡೈ ಕಾರ್‌ ಮಧ್ಯೆ ಮತ್ತೆ ಕಾರ್‌ ಮಾರೋಕೆ ಯಾವುದು ಬೆಸ್ಟ್
ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ, ಪುಸರಖಿತಸ ರಹಸ್ಯ ಬಯಲು