
ನವದೆಹಲಿ [ಜು.15]: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಸಾಮಾನ್ಯ ಜನಜೀವನಕ್ಕೆ ಭಾರೀ ಅಡ್ಡಿಯಾಗಿದ್ದ ಪಾಕಿಸ್ತಾನ ಬೆಂಬಲಿತ ಕಲ್ಲು ತೂರಾಟಗಾರರ ದಿಢೀರನೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅದರಲ್ಲೂ ಕಡಿಮೆಯಾಗಿರುವ ಪ್ರಮಾಣ ಭಾರೀ ಅಚ್ಚರಿ ಹುಟ್ಟಿಸುವಂತಿದೆ. ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕೆಲ ವ್ಯೆಹಾತ್ಮಕ ಕ್ರಮಗಳೇ ಇದಕ್ಕೆ ಕಾರಣ ಎನ್ನಲಾಗಿದೆ.
2016 ರಲ್ಲಿ ರಾಜ್ಯದಲ್ಲಿ ಕಲ್ಲುತೂರಾಟದ ಒಟ್ಟಾರೆ 2600 ಪ್ರಕರಣಗಳು ನಡೆದಿದ್ದರೆ, 2019 ರ ಮೊದಲ ಆರು ತಿಂಗಳಲ್ಲಿ ಇದು ಕೇವಲ 40ಕ್ಕೆ ಕುಸಿದಿದೆ. ಜೊತೆಗೆ ಇಂಥ ಪ್ರಕರಣಗಳಲ್ಲಿ ಬಂಧಿತರಾಗುವವರ ಪ್ರಮಾಣದಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರುವುದು ಕೂಡಾ ಯುವಕರಿಗೆ ಒಂದು ರೀತಿಯ ಉದ್ಯೋಗ. ಅಲ್ಲಿ ಕಲ್ಲು ತೂರುವ ಯುವಕರಿಗೆ ಪಾಕಿಸ್ತಾನ ಸರ್ಕಾರವು, ಪ್ರತ್ಯೇಕತಾವಾದಿ ನಾಯಕರ ಮೂಲಕ ವೇತನದ ರೂಪದಲ್ಲಿ ಹಣ ಪಾವತಿ ಮಾಡುತ್ತದೆ.
ಹೀಗಾಗಿ ದಶಕಗಳಿಂದಲೂ ರಾಜ್ಯದ ವಿವಿಧ ಭಾಗಗಳಲ್ಲಿ ಕಲ್ಲುತೂರಾಟ ಪ್ರಕರಣ ಎಗ್ಗಿಲ್ಲದೇ ನಡೆಯು ತ್ತಿದ್ದು, ಭದ್ರತಾ ಪಡೆಗಳಿಗೆ ತಲೆನೋವು ತಂದಿತ್ತು. ಇದೀಗ ಈ ಸಮಸ್ಯೆ ಕಡಿಮೆಯಾಗಿ ಅಚ್ಚರಿ ಉಂಟು ಮಾಡಿದೆ.
ಕಾರಣ ಏನು?: ಈ ಹಿಂದೆ ರಾಜ್ಯದಲ್ಲಿದ್ದ ಅಧಿಕಾರ ನಡೆಸುತ್ತಿದ್ದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಕಲ್ಲು ತೂರಾಟಗಾರರ ವಿರುದ್ಧ ಮೃದುಧೋರಣೆ ತಾಳುತ್ತಿದ್ದವು. ಆದರೆ 2018 ರಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು
ಬಿಜೆಪಿ ಹಿಂಪಡೆದ ಬಳಿಕ, ರಾಜ್ಯದಲ್ಲಿ ರಾಜ್ಯಾಪಾಲರ ಆಳ್ವಿಕೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಭದ್ರತಾ ಪಡೆಗಳು ಪ್ರತ್ಯೇಕತಾವಾದಿಗಳು, ಕಲ್ಲುತೂರಾಟಗಾರರ ವಿರುದ್ಧ ಕಠಿಣ ಕ್ರಮ ಆರಂಭಿಸಿವೆ.
ಜೊತೆಗೆ ಆಯಕಟ್ಟಿನ ಜಾಗದಲ್ಲಿ ಬಿಗಿಬಂದೋಬಸ್ತ್ ತೀವ್ರಗೊಳಿಸಿವೆ. ಜೊತೆಗೆ ರಾಜ್ಯದಲ್ಲಿ 2018 ರ ಬಳಿಕ 240 ಕ್ಕೂ ಹೆಚ್ಚು
ಉಗ್ರರನ್ನು ಕೊಲ್ಲಲಾಗಿದೆ. ಈ ಬೆಳವಣಿಗೆಗಳು ಕಲ್ಲುತೂರಾಟಗಾರ ಜಂಘಾಬಲ ಉಡುಗಿಸಿದೆ. ಮತ್ತೊಂದೆಡೆ ಕಲ್ಲುತೂರಾಟ ಗಾರರಿಗೆ ಹಣ ಪೂರೈಕೆ ಮಾಡುತ್ತಿದ್ದ ಪ್ರತ್ಯೇಕತಾವಾದಿ ಗಳನ್ನು ಎನ್ಐಎ ತನ್ನ ಖೆಡ್ಡಾಕ್ಕೆ ಕೆಡವಿಕೊಂಡಿರುವುದು, ಕಲ್ಲು ತೂರಾಟ ಗಾರರಿಗೆ ಹಣದ ಪೂರೈಕೆಯನ್ನೇ ಬಂದ್ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.