ಲೋಕಸಭಾ ಚುಣಾವಣೆ ಮುಕ್ತಾಯವಾಗಿ ಫಲಿತಾಂಶವೂ ಪ್ರಕಟವಾಗಿದೆ. ಇದೇ ವೇಳೆ ಮೈತ್ರಿಯಲ್ಲಿ ಬಂಡಾಯದ ಬಿಸಿ ಎದ್ದಿದೆ.
ಬಳ್ಳಾರಿ : ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು, ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ಗೆಲ್ಲೋದು ಸಿದ್ದರಾಮಯ್ಯಗೆ ಇಷ್ಟವಿರಲಿಲ್ಲ. ಈ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಸಾಕಷ್ಟುವರ್ಷಗಳಿಂದ ಸಿದ್ದರಾಮಯ್ಯ ಕಾಯುತ್ತಿದ್ದ ಅವರು ಈ ಚುನಾವಣೆಯಲ್ಲಿ ತನ್ನ ಹಿಂಬಾಲಕರಿಗೆ ಹೇಳಿ ದೇವೇಗೌಡರು ಹಾಗೂ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.
ಕನ್ನಡಪ್ರಭ ಪ್ರತಿನಿಧಿಯೊಂದಿಗೆ ಶನಿವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು. ಗೌಡರ ಕುಟುಂಬವನ್ನು ಒಡೆದು ಹಾಕಬೇಕು ಎಂದು ಸಾಕಷ್ಟುದಿನಗಳಿಂದ ಕಾಯುತ್ತಿದ್ದ ಸಿದ್ದರಾಮಯ್ಯ ಕಾದು ನೋಡಿ ಹೊಡೆದರು. ಒಳ್ಳೆಯ ಅವಕಾಶ ಸಿಕ್ಕಿತು ಎಂದು ತನ್ನ ಹಗೆ ತೀರಿಸಿಕೊಂಡರು ಎಂದು ಹೇಳಿದರು.
ಇದೇವೇಳೆ ಮೇಲ್ನೋಟಕ್ಕಷ್ಟೇ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಚೆನ್ನಾಗಿದ್ದಾರೆ ಎಂಬಂತೆ ಕಂಡು ಬರುತ್ತದೆ. ಆದರೆ, ಈ ಇಬ್ಬರಿಗೂ ಒಬ್ಬರನ್ನು ಕಂಡರೆ ಆಗಲ್ಲ ಎಂದರು.