ಪಾಕಿಸ್ತಾನದ ಗಡಿಯಲ್ಲಿರುವ ಗ್ರಾಮವೊಂದರಲ್ಲಿ ಮೂರರಿಂದ ನಾಲ್ವರು ಉಗ್ರರು ಬೀಡುಬಿಟ್ಟಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರಿಗೆ ಮತ್ತು ಭದ್ರತಾ ಪಡೆಗಳಿಗೆ ಗುಪ್ತಚರ ದಳ ತಿಳಿಸಿದೆ.
ಜಮ್ಮು(ಜ.22): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜ.೨೬ರಂದು ನಡೆಯಲಿರುವ ಗಣರಾಜ್ಯೋತ್ಸವವನ್ನು ಗುರಿಯಾಗಿಸುವ ಪಾಕಿಸ್ತಾನ ಬೆಂಬಲಿತ ಉಗ್ರರು ಜಮ್ಮು-ಕಾಶ್ಮೀರದ ಗಡಿಯಿಂದ ಭಾರತದೊಳಕ್ಕೆ ನುಸುಳಬಹುದು ಎಂಬ ಮುನ್ಸೂಚನೆಯನ್ನು ಗುಪ್ತಚರ ದಳ ನೀಡಿದೆ.
ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಗಡಿಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದ್ದು, ಉಗ್ರರು ನುಸುಳದಂತೆ ತಡೆಯಲು 24 ಗಂಟೆಯೂ ಗಸ್ತಿಗಾಗಿ ಯೋಧರನ್ನು ನಿಯೋಜಿಸಲಾಗಿದೆ. ಪಾಕಿಸ್ತಾನದ ಗಡಿಯಲ್ಲಿರುವ ಗ್ರಾಮವೊಂದರಲ್ಲಿ ಮೂರರಿಂದ ನಾಲ್ವರು ಉಗ್ರರು ಬೀಡುಬಿಟ್ಟಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರಿಗೆ ಮತ್ತು ಭದ್ರತಾ ಪಡೆಗಳಿಗೆ ಗುಪ್ತಚರ ದಳ ತಿಳಿಸಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲೇ ಗಡಿಯಲ್ಲಿರುವ ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ, ಭಾರತದಲ್ಲಿನ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲು ಈ ಭಯೋತ್ಪಾದಕರ ಗುಂಪನ್ನು ಭಾರತದ ಗಡಿಯೊಳಕ್ಕೆ ನುಗ್ಗಿಸಲು ಪಾಕಿಸ್ತಾನದ ಐಎಸ್ಐ ಯತ್ನಿಸುತ್ತಿದೆ.