
ನವದೆಹಲಿ(ಅ.13): ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕಣಿವೆ ರಾಜ್ಯ ಕಾಶ್ಮೀರ ಕುರಿತು ಅದರ ನೀತಿಯ ಬಗ್ಗೆ ಪರ ಮತ್ತು ವಿರೋಧದ ಅಭಿಪ್ರಾಯವಿದೆ. ಆದರೆ ಅಂತಿಮವಾಗಿ ಉಗ್ರಗ್ರಾಮಿ ಚಟುವಟಿಕೆಯನ್ನು ಹತ್ತಿಕ್ಕಲು ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳ ಕುರಿತು ಯಾರಿಗೂ ಅಷ್ಟೇನು ಅಭಿಪ್ರಾಯ ಭೇದ ಇದ್ದಂತಿಲ್ಲ.
ಕಣಿವೆಯಲ್ಲಿ ಉಗ್ರರ ಉಪಟಳಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಂತೆ ಪ್ರಸಕ್ತ ವರ್ಷದಲ್ಲಿ ಒಟ್ಟು 163 ಉಗ್ರರನ್ನು ಭದ್ರತಾಪಡೆಗಳು ಮಟ್ಟ ಹಾಕಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರದ ದಿಟ್ಟ ಕ್ರಮಗಳು, ಸೇನೆಯ ಅತ್ಯುತ್ಸಾಹಿ ಕಾರ್ಯಾಚರಣೆಗಳ ನೆರವಿನಿಂದ ಈ ವರ್ಷ 163 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ವರದಿ ತಿಳಿಸಿದೆ. 2016 ರಲ್ಲಿ 150, 2017 ರಲ್ಲಿ 213 ಮತ್ತು ಈ ವರ್ಷದ ಸೆಪ್ಟೆಂಬರ್ ವರೆಗೆ 163 ಉಗ್ರರರನ್ನು ಹೊಡೆದುರುಳಿಸಲಾಗಿದೆ.
ಇನ್ನು ಬಹುತೇಕ ಕಾರ್ಯಾಚರಣೆಗಳಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳ ಉನ್ನತ ನಾಯಕರುಗಳನ್ನೇ ಹೊಡೆದುರುಳಿಸಲಾಗಿದೆ. ವಿವಿಧ ಉಗ್ರ ಸಂಘಟನೆಗಳ ಟಾಪ್ ಕಮಾಂಡರ್ ಗಳನ್ನು A, A++ ಕೆಟಗಿರಿಯಲ್ಲಿ ವಿಭಾಗಿಲಾಗಿದ್ದು, ಪ್ರಮುಖವಾಗಿ ಲಷ್ಕರ್-ಎ-ತೋಯ್ಬಾ ಸಂಘಟನೆಯ ಅಬು ದುಜಾನಾ, ಬಶೀರ್ ಲಷ್ಕರಿ, ಹುಜ್ಬುಲ್ ಮುಜಾಹೀದಿನ್ ಸಂಘಟನೆಯ ಸಬ್ಜರ್ ಭಟ್, ಅಬು ಹ್ಯಾರೀಸ್, ಮನನ್ ವಾನಿ, ಯಾಸೀನ್ ಹಿಟೂ ದಂತ ಉನ್ನತ ಕಮಾಂಡರ್ ಗಳನ್ನು ಎನ್ ಕೌಂಟರ್ ಗಳಲ್ಲಿ ಹೊಡೆದುರುಳಿಸಲಾಗಿದೆ.
2017 ರಲ್ಲಿ ಪ್ರಾರಂಭಿಸಲಾದ ಭಾರತೀಯ ಸೇನೆ, ಸಿಆರ್ ಪಿಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಬಲದ ಜಂಟಿ ಕಾರ್ಯಾಚರಣೆಯಾದ ‘ಆಪರೇಶನ್ ಆಲ್ ಔಟ್’ ಕಣಿವೆಯನ್ನು ಉಗ್ರರಿಂದ ಮುಕ್ತಗೊಳಿಸುವತ್ತ ದೃಢವಾಗಿ ಹೆಜ್ಜೆ ಇರಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.