ದಿಲ್ಲಿಗೆ ಬಾಸ್ ಯಾರು ..?

First Published Jul 4, 2018, 11:32 AM IST
Highlights

ರಾಜಧಾನಿ ನವದೆಹಲಿಯಲ್ಲಿ ಚುನಾಯಿತ ರಾಜ್ಯ ಸರ್ಕಾರಕ್ಕೆ ಆಡಳಿತದಲ್ಲಿ ಹೆಚ್ಚಿನ ಅಧಿಕಾರ ಇದೆಯೋ ಅಥವಾ ಕೇಂದ್ರ ಸರ್ಕಾರದಿಂದ ನೇಮಿತ ಉಪರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ಇದೆಯೋ ಎಂಬುದರ ಕುರಿತು ಸುಪ್ರೀಂಕೋರ್ಟ್‌ ಇಂದು ಮಹತ್ವದ ತೀರ್ಪು ನೀಡಲಿದೆ.
 

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ಚುನಾಯಿತ ರಾಜ್ಯ ಸರ್ಕಾರಕ್ಕೆ ಆಡಳಿತದಲ್ಲಿ ಹೆಚ್ಚಿನ ಅಧಿಕಾರ ಇದೆಯೋ ಅಥವಾ ಕೇಂದ್ರ ಸರ್ಕಾರದಿಂದ ನೇಮಿತ ಉಪರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ಇದೆಯೋ ಎಂಬುದರ ಕುರಿತು ಸುಪ್ರೀಂಕೋರ್ಟ್‌ ಇಂದು ಮಹತ್ವದ ತೀರ್ಪು ನೀಡಲಿದೆ.

ಉಪರಾಜ್ಯಪಾಲರು ರಾಷ್ಟ್ರ ರಾಜಧಾನಿಯ ಆಡಳಿತಾತ್ಮಕ ಮುಖ್ಯಸ್ಥರು ಎಂಬ ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಿಎಂ ಅರವಿಂದ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರ ಅರ್ಜಿ ಸಲ್ಲಿಸಿತ್ತು. ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಕಾನೂನು ರಚಿಸುವ ಅಧಿಕಾರ ಇದೆ ಎಂದಾದಲ್ಲಿ, ಅದನ್ನು ಜಾರಿಗೊಳಿಸುವಲ್ಲಿಯೂ ಅಷ್ಟೇ ಅಧಿಕಾರ ಇದೆ ಎಂದು ಆಪ್‌ ಸರ್ಕಾರ ವಾದಿಸಿತ್ತು. ಆದರೆ ದೆಹಲಿಯಲ್ಲಿ ಆಡಳಿತದ ವಿಷಯದಲ್ಲಿ ಚುನಾಯಿತ ಸರ್ಕಾರಕ್ಕೆ ಪರಮಾಧಿಕಾರ ಇಲ್ಲ. ಇಂಥ ಯಾವುದೇ ಅಧಿಕಾರ ರಾಷ್ಟ್ರೀಯ ಹಿತಾಸಕ್ತಿ ಮಾರಕ. ದೆಹಲಿಗೆ ಪೂರ್ಣಪ್ರಮಾಣದ ರಾಜ್ಯದ ಸ್ಥಾನಮಾನ ನೀಡದ ಬಗ್ಗೆ ವರದಿ ನೀಡಿದ್ದ 1989ರ ಬಾಲಕೃಷ್ಣನ್‌ ಸಮಿತಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ವಿಚಾರಣೆ ವೇಳೆ ಆಪ್‌ ಸರ್ಕಾರದ ನಿಲುವಿನ ವಿರುದ್ಧವಾಗಿ ಕೇಂದ್ರ ಸರ್ಕಾರ ವಾದಿಸಿತ್ತು.

ಈ ಅರ್ಜಿಯನ್ನು ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಕಳೆದ ವರ್ಷದ ನವೆಂಬರ್‌ನಲ್ಲಿ ಅರ್ಜಿ ವಿಚಾರಣೆ ನಡೆಸಿ, ಡಿ.6ರಂದು ತೀರ್ಪು ಕಾದಿರಿಸಿತ್ತು. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ದೆಹಲಿ ಉಪರಾಜ್ಯಪಾಲ ಮತ್ತು ಮುಖ್ಯಮಂತ್ರಿ ನಡುವೆ ಹಲವು ಬಾರಿ ತಿಕ್ಕಾಟಗಳು ನಡೆದಿತ್ತು. ಇದು ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ತೀರ್ಪು ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.

click me!