ಕೇಂದ್ರಕ್ಕೆ ರಾಮಬಾಣ ಬಿಟ್ಟ RSS!

Published : Dec 10, 2018, 07:45 AM IST
ಕೇಂದ್ರಕ್ಕೆ ರಾಮಬಾಣ ಬಿಟ್ಟ RSS!

ಸಾರಾಂಶ

ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಹಿಂದು ಸಂಘಟನೆಗಳು ನಿರಂತರವಾಗಿ ಆಗ್ರಹಪಡಿಸುತ್ತಿವೆ. ಹೀಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್‌ ಕಿಡಿಕಾರಿದೆ.

ನವದೆಹಲಿ[ಡಿ.10]: ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಹಿಂದು ಸಂಘಟನೆಗಳು ನಿರಂತರವಾಗಿ ಆಗ್ರಹಪಡಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್ ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದೆ. 

‘ಇಂದು ಅಧಿಕಾರದಲ್ಲಿರುವವರು ರಾಮಮಂದಿರ ಕಟ್ಟುವ ಭರವಸೆ ನೀಡಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂಬ ಜನರ ಬೇಡಿಕೆಯನ್ನು ಅವರು ಆಲಿಸಿಕೊಳ್ಳಬೇಕು. ಮಂದಿರಕ್ಕಾಗಿ ನಾವೇನು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಭಾವನೆಗಳನ್ನು ಹೇಳಿಕೊಳ್ಳುತ್ತಿದ್ದೇವೆ. ಈ ದೇಶಕ್ಕೆ ರಾಮ ರಾಜ್ಯದ ಅಗತ್ಯವಿದೆ’ ಎಂದು ಆರ್‌ಎಸ್‌ಎಸ್ ಹಿರಿಯ ನಾಯಕ ಸುರೇಶ್ ‘ಭಯ್ಯಾಜಿ’ ಜೋಶಿ ಕಿಡಿಕಾರಿದ್ದಾರೆ.

ಮಂಗಳವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಾಮಮಂದಿರಕ್ಕಾಗಿ ಒತ್ತಡ ಹೇರಲು ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿಶ್ವ ಹಿಂದು ಪರಿಷತ್ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ರ‌್ಯಾಲಿಯಲ್ಲಿ ಮಾತನಾಡಿದ ಅವರು, ಯಾವ ದೇಶ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪನಂಬಿಕೆ ಬೆಳೆಸಿಕೊಳ್ಳುವುದೋ ಅದು ಅಭಿವೃದ್ಧಿಯ ಹಾದಿಯಲ್ಲಿ ನಡೆಯಲಾರದು. 

ಸುಪ್ರೀಂಕೋರ್ಟ್ ಈ ವಿಚಾರ ಅರ್ಥ ಮಾಡಿಕೊಂಡು, ಸಾರ್ವಜನಿಕರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅಗತ್ಯಬಿದ್ದರೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು. ಯಾವುದೇ ಸಮುದಾಯದ ಜತೆ ನಾವು ಸಂಘರ್ಷಕ್ಕೆ ಇಳಿದಿಲ್ಲ. ಭಿಕ್ಷೆಯನ್ನೂ ಬೇಡುತ್ತಿಲ್ಲ. ಕಾನೂನು ರೂಪಿಸುವುದೊಂದೇ ರಾಮಮಂದಿರಕ್ಕೆ ಪರಿಹಾರ. ಭರವಸೆ ಈಡೇರುವವರೆಗೂ ಚಳವಳಿ ನಿಲ್ಲುವುದಿಲ್ಲ ಎಂದು ಹೇಳಿದರು. ವಿಎಚ್‌ಪಿ ಅಧ್ಯಕ್ಷ ವಿಷ್ಣು ಸದಾಶಿವ ಕೋಕ್ಜೆ ಮಾತನಾಡಿ, ಜನರ ಭಾವನೆಗಳನ್ನು ಗೌರವಿಸಬೇಕು. ಪ್ರಜಾಪ್ರಭುತ್ವದಲ್ಲಿ ಜನರೇ ಸುಪ್ರೀಂ ಹೊರತು ಕೋರ್ಟು ಅಲ್ಲ. ಮಸೀದಿ ಜಾಗದಲ್ಲಿ ನಾವು ರಾಮಮಂದಿರ ಬಯಸುತ್ತಿದ್ದೇವೆ ಎಂಬುದು ತಪ್ಪು ಕಲ್ಪನೆ. ದೇಗುಲವನ್ನು ನಾಶಪಡಿಸಿ ಮಸೀದಿಯನ್ನು ಕಟ್ಟಲಾಗಿದೆ. ರಾಮಮಂದಿರಕ್ಕಾಗಿ ಬೇಡಿಕೆ ಚುನಾವಣಾ ವಿಷಯವಲ್ಲ. ದೇಶದಲ್ಲಿ ಪ್ರತಿ ಆರು ತಿಂಗಳಿಗೆ ಚುನಾವಣೆ ನಡೆಯುತ್ತಿರುತ್ತದೆ ಎಂದರು. 

ಭಾನುವಾರ ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಈ ರ‌್ಯಾಲಿಗೆ ದೆಹಲಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಲಕ್ಷಾಂತರ ಜನ ಭಾಗವಹಿಸಿದ್ದರು. ರ‌್ಯಾಲಿಯಲ್ಲಿ ಯಶಸ್ವಿಗೊಳಿಸಲು ವಿಎಚ್‌ಪಿ ನಾಯಕರು ಮನೆಮನೆಗೆ ತೆರಳಿ ಪ್ರಚಾರ ನಡೆಸಿದ್ದರು. ಹೀಗಾಗಿ ದಿಲ್ಲಿ ರ‌್ಯಾಲಿಗೆ ಭಾರೀ ಪ್ರಮಾಣದ ಜನ ಸೇರಿದ್ದು, ರಾಮಲೀಲಾ ಮೈದಾನ ಪೂರ್ಣ ಕೇಸರಿಮಯವಾಗಿತ್ತು. ರ‌್ಯಾಲಿಯಲ್ಲಿ ಭಾಗವಹಿಸಿದ್ದ ರಾಮಭಕ್ತರು, ನಮಗೆ ಸ್ಯಾಂಪಲ್ ಬೇಡ, ಟೆಂಪಲ್ ಬೇಕು, ಮತ್ತೆ ರಾಮರಾಜ್ಯ ಸ್ಥಾಪಿಸುತ್ತೇವೆ, ಅಲ್ಲಿಯೇ ರಾಮಮಂದಿರ ನಿರ್ಮಿಸುತ್ತೇವೆ ಎಂಬ ಘೋಷಣೆಗಳನ್ನು ಕೂಗಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?