ಬೆಂಗಳೂರು(ಸೆ.17): ಕಾವೇರಿಗಾಗಿ ಬೆಂಗಳೂರು ಹೊತ್ತಿ ಉರಿಯಲು RSS ಕಾರಣ. ಹೀಗೊಂದು ಅನುಮಾನ ವ್ಯಕ್ತವಾಗಿದ್ದು ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ. ಈ ಅನುಮಾನದ ಬಗ್ಗೆ ತನಿಖೆ ನಡೆಸಿಯೇ ಸಿದ್ದ ಎಂದು ಗೃಹಸಚಿವರೂ ವಚನವಿತ್ತಿದ್ದಾರೆ. ಹಾಗಾದ್ರೆ ನಿಜಕ್ಕೂ ಕೆಪಿಸಿಸಿ ಸಭೆಯಲ್ಲಿ ನಡೆದಿದ್ದು ಏನು? ಇಲ್ಲಿದೆ ವಿವರ.
ಕಾವೇರಿ ವಿಚಾರವಾಗಿ ಕಳೆದ ಸೋಮವಾರ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಬೆಂಗಳೂರಂತು ಅಕ್ಷರಶಃ ಬೆಂಕಿಯ ಕೆನ್ನಾಲಿಗೆಗೆ ನಲುಗಿತ್ತು. ಈ ಗಲಭೆ ಹಿಂದೆ RSS ಕೈವಾಡ ಇದೆ ಎಂದು ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆಗೂ ಕಾಂಗ್ರೆಸಿಗರು ಒತ್ತಾಯಿಸಿದ್ದಾರೆ. ಸಭೆಯ ಬಳಿಕ ಈ ಬಗ್ಗೆ ಮಾತನಾಡಿದ ಗೃಹ ಸಚಿವ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಗಲಭೆ ಹಿಂದೆ ಆರೆಸ್ಸೆಸ್ ಕೈವಾಡದ ಬಗ್ಗೆ ತನಿಖೆ ನಡೆಸಲಾಗುವುದು ಅಂತ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಾದ ವಿ ಎಸ್ ಉಗ್ರಪ್ಪ ಮತ್ತು ಎಚ್.ಎಂ. ರೇವಣ್ಣ ಕೂಡ ಕಾವೇರಿ ಗಲಭೆ ಹಿಂದೆ ಆರೆಸ್ಸೆಸ್ ಇದೆ ಎಂದು ಆರೋಪಿದ್ದರು.
ರಾಜ್ಯ ಬಂದ್ ನಡೆದ ಸಂದರ್ಭದಲ್ಲಿ ನಡೆದ ಗಲಾಟೆಯ ಕುರಿತು ಸರ್ಕಾರ ಯಾವುದೇ ತನಿಖೆಗೆ ಆದೇಶ ಮಾಡಿಲ್ಲ. ಈಗ RSS ಗಲಭೆಯ ಹಿಂದಿದೆ ಎಂದು ಕಾಂಗ್ರೆಸಿಗರು ಆರೋಪಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತೆ ಅನ್ನೋದೇ ಸದ್ಯದ ಕುತೂಹಲ.