
ನವದೆಹಲಿ(ಏ. 20): ಭಾರತಕ್ಕೆ ಸೇರಿದ ಅರುಣಾಚಲ ಪ್ರದೇಶವನ್ನು ತನ್ನದೆಂದು ವಾದಿಸುತ್ತಿರುವ ಚೀನಾ ನಿನ್ನೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ರಾಜ್ಯದ ಕೆಲ ಪ್ರದೇಶಗಳ ಹೆಸರಿಗೆ ತನ್ನದೇ ಭಾಷೆಯಲ್ಲಿ ಮರುನಾಮಕರಣ ಮಾಡಿ ಬೀಗಿಕೊಳ್ಳುತ್ತಿದೆ. ಈ ವಿಷಯವಾಗಿ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತ ಸರಕಾರ, ಹೆಸರು ಬದಲಿಸಿದರೆ ಅಕ್ರಮ ನಾಡು ಸ್ವಂತದ್ದಾಗುವುದಿಲ್ಲ ಎಂದು ಟಾಂಗ್ ಕೊಟ್ಟಿದೆ. ಅರುಣಾಚಲ ಯಾವತ್ತಿದ್ದರೂ ಭಾರತದ ಅವಿಭಾಜ್ಯ ಅಂಗ. ಅರುಣಾಚಲದ ಸ್ಥಳಗಳಿಗೆ ಹೊಸ ಹೆಸರು ಕೊಡುವ ಯಾವ ಹಕ್ಕೂ ಚೀನಾಗೆ ಇಲ್ಲ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಚೀನಾ ದೇಶವು ಭಾರತದಲ್ಲಿರುವ ಅರುಣಾಚಲಪ್ರದೇಶ ರಾಜ್ಯವನ್ನು ತನ್ನದೆಂದು ಪ್ರಬಲವಾಗಿ ವಾದಿಸುತ್ತಿದೆ. ಅರುಣಾಚಲವನ್ನು ದಕ್ಷಿಣ ಟಿಬೆಟ್ ಎಂದೂ ಕರೆಯುವ ಚೀನಾ ನಿನ್ನೆ ಆ ರಾಜ್ಯದ 6 ಸ್ಥಳಗಳಿಗೆ ಹೊಸ ನಾಮಕರಣ ಮಾಡಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹೆಸರುಗಳು ಸೌತ್ ಟಿಬೆಟ್ ಮೇಲೆ ಚೀನಾಗಿರುವ ಹಕ್ಕನ್ನು ಪ್ರತಿಫಲಿಸುತ್ತವೆ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಆಡಳಿತಾತ್ಮಕವಾಗಿ ಸ್ಪಷ್ಟ ಸಾಕ್ಷ್ಯಾಧಾರಗಳಿಂದ ಮರುನಾಮಕರಣ ಮಾಡಿದ್ದೇವೆ ಎಂದು ಚೀನಾದ ವಿದೇಶಾಂಗ ಸಚಿವ ಲೂ ಕಾಂಗ್ ಹೇಳಿಕೆ ನೀಡಿದ್ದಾರೆ.
ಚೀನಾದ ಈ ಕ್ರಮ ಮೊದಮೊದಲು ಹಾಸ್ಯಾತ್ಮಕವಾಗಿ ಕಾಣಿಸಿದರೂ ರಾಜತಾಂತ್ರಿಕ ದೃಷ್ಟಿಯಿಂದ ಚೀನಾದ ಧೋರಣೆ ಬಲು ಅಪಾಯಕಾರಿಯಾಗಿದೆ. ಭಾರತ ಕಟ್ಟುನಿಟ್ಟಾಗಿ ಉತ್ತರಿಸದಿದ್ದರೆ ಬಹಳ ಗಂಭೀರ ಪರಿಸ್ಥಿತಿ ತಲೆದೋರಬಹುದು ಎಂಬಂತಹ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.