
ಬೆಂಗಳೂರು: ಪರಿಶಿಷ್ಟ ಪಂಗಡಗಳಿಗೆ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಇನ್ನೆರಡು ಸ್ಥಾನ ನೀಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅವರಲ್ಲಿ ಮನವಿ ಮಾಡಿಕೊಂಡಿರುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ನಾನು ತಿಂಗಳಿಗೆ ಒಮ್ಮೆ ದೆಹಲಿಗೆ ಬರುತ್ತೇನೆ. ಮೂರು ದಿನಗಳ ಹಿಂದೆ ದೆಹಲಿಗೆ ಬಂದಿದ್ದೆ. ನಾನು ಹುಟ್ಟು ಕಾಂಗ್ರೆಸಿಗ, ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಬೇಕಿದ್ದರೆ ಬಿಜೆಪಿಯಿಂದಲೇ 10 ಶಾಸಕರನ್ನು ಕಾಂಗ್ರೆಸಿಗೆ ಕರೆ ತರುವ ಶಕ್ತಿ ನನಗಿದೆ ಎಂದು ಜಾರಕಿಹೊಳಿ ಇದೇ ಸಂದರ್ಭದಲ್ಲಿ ಹೇಳಿದರು.
ಬಿಎಸ್ವೈ ಜತೆಗಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರ ಜತೆಗೆ ಸೋಮವಾರ ದೆಹಲಿಗೆ ಬಂದಿದ್ದೇನೆ ಎನ್ನುವ ಸುದ್ದಿ ಸುಳ್ಳು. ನಾನು ಅವರಿಗಿಂತ ಮೊದಲೇ ಬಂದಿದ್ದೇನೆ ಎಂದು ಸಚಿವ ಸ್ಪಷ್ಟಪಡಿಸಿದರು. ರಹೀಂ, ನಾಗೇಂದ್ರರ ಪರ ಲಾಬಿ: ಕಳೆದ ಕೆಲ ದಿನಗಳಿಂದ ಏಳು ಶಾಸಕರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟಿರುವ ರಮೇಶ್ ಜಾರಕಿಹೊಳಿ ಅವರು ತಮ್ಮೊಂದಿಗೆ 16 ಶಾಸಕರಿದ್ದು ಬೀದರ್ ಉತ್ತರದ ರಹೀಂ ಖಾನ್ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಜತೆಗೆ ಲಾಬಿ ನಡೆಸುತ್ತಿದ್ದಾರೆ.
ಈ ಸಂಬಂಧ ವೇಣುಗೋಪಾಲ್ ಅವರೊಂದಿಗೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಎಐಸಿಸಿ ಕಾರ್ಯದರ್ಶಿ ಮಾಣಿಕ್ ಠಾಕೂರ್ ಅವರನ್ನೂ ಜಾರಕಿಹೊಳಿ ತಮ್ಮೊಂದಿಗಿನ ಶಾಸಕರೊಂದಿಗೆ ಭೇಟಿಯಾಗಿದ್ದಾರೆ. ಜಾರಕಿಹೊಳಿ ಜೊತೆ ಶಾಸಕರಾದ ಪ್ರತಾಪ್ ಗೌಡ ಪಾಟೀಲ್, ಬಿ. ನಾಗೇಂದ್ರ, ನಾರಾಯಣ ರಾವ್, ರಹೀಂ ಖಾನ್, ಡಿ.ಎಸ್. ಹೂಲಗೇರಿ, ಬಸನಗೌಡ ದಡ್ಡಲ್, ಮಹೇಶ್ ಕುಮಟಳ್ಳಿ ಅವರು ದೆಹಲಿಯಲ್ಲಿ ಇದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.