ಬಿಎಸ್ ವೈ ಜೊತೆ ಸಚಿವ ಜಾರಕಿಹೊಳಿ ದಿಲ್ಲಿಗೆ ಹೋಗಿದ್ದೇಕೆ..?

By Web DeskFirst Published Aug 8, 2018, 10:26 AM IST
Highlights

ಸಚಿವ ರಮೇಶ್ ಜಾರಕಿಹೊಳಿ ಅವರು ಬಿಎಸ್ ವೈ ಜೊತೆಗೆ ದಿಲ್ಲಿಗೆ ತೆರಳಿದ್ದರು ಎನ್ನುವ ವಿಚಾರ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಈ ಸಂಬಂಧ ಅವರು ಸ್ಪಷ್ಟನೆ ನೀಡಿದ್ದಾರೆ. ತಾವು ದಿಲ್ಲಿಗೆ ತೆರಳಿದ್ದು ನಿಜವಾದರೂ ಬಿಎಸ್ ವೈ ಜೊತೆಗೆ ಹೋಗಿರಲಿಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರು: ಪರಿಶಿಷ್ಟ ಪಂಗಡಗಳಿಗೆ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಇನ್ನೆರಡು ಸ್ಥಾನ ನೀಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅವರಲ್ಲಿ ಮನವಿ ಮಾಡಿಕೊಂಡಿರುವುದಾಗಿ ರಮೇಶ್ ಜಾರಕಿಹೊಳಿ  ಹೇಳಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ  ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ನಾನು ತಿಂಗಳಿಗೆ ಒಮ್ಮೆ ದೆಹಲಿಗೆ ಬರುತ್ತೇನೆ. ಮೂರು ದಿನಗಳ ಹಿಂದೆ ದೆಹಲಿಗೆ ಬಂದಿದ್ದೆ. ನಾನು ಹುಟ್ಟು ಕಾಂಗ್ರೆಸಿಗ, ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಬೇಕಿದ್ದರೆ ಬಿಜೆಪಿಯಿಂದಲೇ 10 ಶಾಸಕರನ್ನು ಕಾಂಗ್ರೆಸಿಗೆ ಕರೆ ತರುವ ಶಕ್ತಿ ನನಗಿದೆ ಎಂದು ಜಾರಕಿಹೊಳಿ ಇದೇ ಸಂದರ್ಭದಲ್ಲಿ ಹೇಳಿದರು.

ಬಿಎಸ್‌ವೈ ಜತೆಗಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರ ಜತೆಗೆ ಸೋಮವಾರ ದೆಹಲಿಗೆ ಬಂದಿದ್ದೇನೆ ಎನ್ನುವ ಸುದ್ದಿ ಸುಳ್ಳು. ನಾನು ಅವರಿಗಿಂತ ಮೊದಲೇ ಬಂದಿದ್ದೇನೆ ಎಂದು ಸಚಿವ ಸ್ಪಷ್ಟಪಡಿಸಿದರು. ರಹೀಂ, ನಾಗೇಂದ್ರರ ಪರ ಲಾಬಿ: ಕಳೆದ ಕೆಲ ದಿನಗಳಿಂದ ಏಳು ಶಾಸಕರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟಿರುವ ರಮೇಶ್ ಜಾರಕಿಹೊಳಿ ಅವರು ತಮ್ಮೊಂದಿಗೆ 16 ಶಾಸಕರಿದ್ದು ಬೀದರ್ ಉತ್ತರದ ರಹೀಂ ಖಾನ್ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಜತೆಗೆ ಲಾಬಿ ನಡೆಸುತ್ತಿದ್ದಾರೆ.

ಈ ಸಂಬಂಧ ವೇಣುಗೋಪಾಲ್ ಅವರೊಂದಿಗೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಎಐಸಿಸಿ ಕಾರ್ಯದರ್ಶಿ ಮಾಣಿಕ್ ಠಾಕೂರ್ ಅವರನ್ನೂ ಜಾರಕಿಹೊಳಿ ತಮ್ಮೊಂದಿಗಿನ ಶಾಸಕರೊಂದಿಗೆ  ಭೇಟಿಯಾಗಿದ್ದಾರೆ. ಜಾರಕಿಹೊಳಿ ಜೊತೆ ಶಾಸಕರಾದ ಪ್ರತಾಪ್ ಗೌಡ ಪಾಟೀಲ್, ಬಿ. ನಾಗೇಂದ್ರ, ನಾರಾಯಣ ರಾವ್, ರಹೀಂ ಖಾನ್, ಡಿ.ಎಸ್. ಹೂಲಗೇರಿ, ಬಸನಗೌಡ ದಡ್ಡಲ್, ಮಹೇಶ್ ಕುಮಟಳ್ಳಿ ಅವರು ದೆಹಲಿಯಲ್ಲಿ ಇದ್ದಾರೆ.

click me!