ಹುತಾತ್ಮ ಯೋಧನಿಗೆ ಹೆಗಲು ಕೊಟ್ಟ ರಾಜನಾಥ ಸಿಂಗ್‌

Published : Feb 16, 2019, 09:33 AM IST
ಹುತಾತ್ಮ ಯೋಧನಿಗೆ  ಹೆಗಲು ಕೊಟ್ಟ ರಾಜನಾಥ ಸಿಂಗ್‌

ಸಾರಾಂಶ

ಸಿಆರ್‌ಪಿಎಫ್‌ನ 40 ಯೋಧರಿಗೆ ಅಂತಿಮ ನಮನ ಸಲ್ಲಿಸಲು ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರಕ್ಕೆ ಶುಕ್ರವಾರ ಆಗಮಿಸಿದ್ದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಸೈನಿಕನೊಬ್ಬನ ಮೃತದೇಹವಿದ್ದ ಶವಪೆಟ್ಟಿಗೆಗೆ ಹೆಗಲು ಕೊಟ್ಟು ಭಾವೋದ್ವೇಗದ ವಿದಾಯ ಹೇಳಿದರು

ಶ್ರೀನಗರ: ಭಯೋತ್ಪಾದಕ ದಾಳಿಯಲ್ಲಿ ಮಡಿದ ಸಿಆರ್‌ಪಿಎಫ್‌ನ 40 ಯೋಧರಿಗೆ ಅಂತಿಮ ನಮನ ಸಲ್ಲಿಸಲು ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರಕ್ಕೆ ಶುಕ್ರವಾರ ಆಗಮಿಸಿದ್ದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಸೈನಿಕನೊಬ್ಬನ ಮೃತದೇಹವಿದ್ದ ಶವಪೆಟ್ಟಿಗೆಗೆ ಹೆಗಲು ಕೊಟ್ಟು ಭಾವೋದ್ವೇಗದ ವಿದಾಯ ಹೇಳಿದರು. ಭಾರತ ಸರ್ಕಾರದ ಪ್ರತಿಷ್ಠಿತ ಹುದ್ದೆಯಲ್ಲಿದ್ದವರು ಈ ರೀತಿ ಹೆಗಲು ಕೊಟ್ಟಿದ್ದು ಬಲು ಅಪರೂಪದ ಪ್ರಸಂಗ ಎನ್ನಿಸಿಕೊಂಡಿತು.

ಹುತಾತ್ಮರಾದ 40 ಯೋಧರ ಕಳೇಬರಗಳನ್ನು ಶವಪೆಟ್ಟಿಗೆಯಲ್ಲಿಟ್ಟು, ತ್ರಿವರ್ಣ ಧ್ವಜ ಹೊದಿಸಲಾಗಿತ್ತು. ಈ ಶವಪೆಟ್ಟಿಗೆಗಳಿಗೆ ರಾಜನಾಥ ಸಿಂಗ್‌ ಅವರು ಹೂಗುಚ್ಛ ಇಟ್ಟು ನಮನ ಸಲ್ಲಿಸಿದರು. ಬಳಿಕ ಶವಪೆಟ್ಟಿಗೆಯನ್ನು ಹೆಗಲ ಮೇಲೆ ಇಟ್ಟುಕೊಂಡು ಟ್ರಕ್‌ಗೆ ಸಾಗಿಸಲು ನೆರವಾದರು. ಅಲ್ಲಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಶವ ಪೆಟ್ಟಿಗೆಗಳನ್ನು ಒಯ್ದು, ವಿಶೇಷ ವಿಮಾನದ ಮೂಲಕ ಯೋಧರ ತವರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು.

ರಾಜನಾಥ ಸಿಂಗ್‌ ಅವರ ಜತೆಗೇ ಜಮ್ಮು-ಕಾಶ್ಮೀರದ ಡಿಜಿಪಿ ದಿಲ್‌ಬಾಘ್‌ ಸಿಂಗ್‌ ಕೂಡ ಹೆಗಲು ಕೊಟ್ಟರು. ಈ ವೇಳೆ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌, ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ಹಾಗೂ ಸಿಆರ್‌ಪಿಎಫ್‌ ಮಹಾನಿರ್ದೇಶಕ ಆರ್‌.ಆರ್‌. ಭಟ್ನಾಗರ್‌ ಅವರು ಇದ್ದರು. ಟ್ರಕ್‌ಗೆ ಶವಪೆಟ್ಟಿಗೆಗಳನ್ನು ತುಂಬುವವರೆಗೂ ಈ ಎಲ್ಲ ಗಣ್ಯರು ಮೌನದಿಂದ ನಿಂತಿದ್ದರು.

ಕೆಚ್ಚೆದೆಯ ಸಿಆರ್‌ಪಿಎಫ್‌ ಯೋಧರ ಮಹಾ ಬಲಿದಾನವನ್ನು ದೇಶ ಮರೆಯುವುದಿಲ್ಲ. ಪುಲ್ವಾಮಾ ಹುತಾತ್ಮರಿಗೆ ಅಂತಿಮ ನಮನ ಸಲ್ಲಿಸಿದ್ದೇನೆ. ಅವರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ರಾಜನಾಥ ಸಿಂಗ್‌ ಅವರು ಈ ವೇಳೆ ಆಕ್ರೋಶದಿಂದ ನುಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ