ಮುಂದಿನ ಚುನಾವಣೆಯಲ್ಲಿ ಪರಿಷತ್ ಸದಸ್ಯರಿಗೆ ಟಿಕೆಟ್ ನೀಡುವುದು ಬೇಡ ಎಂಬ ನಿಯಮ ಜಾರಿಗೆ ಯಡಿಯೂರಪ್ಪ ಚಿಂತಿಸಿದ್ದಾರೆ. ಇದರಿಂದಾಗಿ ಆಕಾಂಕ್ಷಿಗಳಾದ ಕೆ.ಎಸ್. ಈಶ್ವರಪ್ಪ ಮತ್ತು ವಿ.ಸೋಮಣ್ಣ ಅವರಿಗೆ ಟಿಕೆಟ್ ಸಿಗುತ್ತಾ ಎಂಬ ಅನುಮಾನ ಮೂಡಿದೆ.
ಬೆಂಗಳೂರು (ಅ.09): ಮುಂದಿನ ಚುನಾವಣೆಯಲ್ಲಿ ಪರಿಷತ್ ಸದಸ್ಯರಿಗೆ ಟಿಕೆಟ್ ನೀಡುವುದು ಬೇಡ ಎಂಬ ನಿಯಮ ಜಾರಿಗೆ ಯಡಿಯೂರಪ್ಪ ಚಿಂತಿಸಿದ್ದಾರೆ. ಇದರಿಂದಾಗಿ ಆಕಾಂಕ್ಷಿಗಳಾದ ಕೆ.ಎಸ್. ಈಶ್ವರಪ್ಪ ಮತ್ತು ವಿ.ಸೋಮಣ್ಣ ಅವರಿಗೆ ಟಿಕೆಟ್ ಸಿಗುತ್ತಾ ಎಂಬ ಅನುಮಾನ ಮೂಡಿದೆ.
ಹಾಲಿ ಪರಿಷತ್ ಸದಸ್ಯರಾಗಿರುವ ಕೆ. ಎಸ್.ಈಶ್ವ ರಪ್ಪ ಮತ್ತು ವಿ.ಸೋಮಣ್ಣ ಅವರನ್ನು ಗುರಿಯಾಗಿಸಿಕೊಂಡೇ ಇಂಥದ್ದೊಂದು ಗೊಂದಲ ಹುಟ್ಟು ಹಾಕಲಾಗುತ್ತಿದೆ ಎಂಬ ಮಾತೂ ಕೇಳಿಬಂದಿದೆ. ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಸಂಸತ್ ಸದಸ್ಯರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ರವಾನಿಸಿದ್ದಾರೆ. ತೀರಾ ಅನಿವಾರ್ಯವಾದರೆ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೆ ಟಿಕೆಟ್ ನೀಡುವ ನಿರೀಕ್ಷೆಯಿದೆ. ಸದ್ಯ ಪರಿಷತ್ತಿನಲ್ಲಿ ಬಿಜೆಪಿಯ ಸುಮಾರು 23 ಸದಸ್ಯರಿದ್ದರೂ ವಿಧಾನಸಭೆ ಚುನಾವಣೆಯತ್ತ ಗಂಭೀರ ಆಸಕ್ತಿ ತೋರಿದವರು ಈಶ್ವರಪ್ಪ ಮತ್ತು ಸೋಮಣ್ಣ ಅವರಿಬ್ಬರೇ. ಈಶ್ವರಪ್ಪ ಮತ್ತು ಸೋಮಣ್ಣ ಅವರಿಬ್ಬರನ್ನೂ ವಿಧಾನಸಭೆ ಪ್ರವೇಶಿಸದಂತೆ ತಡೆಯುವ ಪ್ರಯತ್ನ ನಡೆಯುತ್ತಿರುವಂತೆ ಕಂಡುಬರುತ್ತಿದೆ. ಕಳೆದ ಬಾರಿ ಈಶ್ವರಪ್ಪ ಅವರು ಶಿವಮೊಗ್ಗ ನಗರ ಕ್ಷೇತ್ರದಿಂದ ಮತ್ತು ಸೋಮಣ್ಣ ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಬಾರಿಯೂ ಅವರಿಬ್ಬರೂ ಆಯಾ ಕ್ಷೇತ್ರಗಳಿಂದ ಗೆಲ್ಲುವುದಿಲ್ಲ, ಆ ಕ್ಷೇತ್ರಗಳಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಬೇಕು, ಈಶ್ವರಪ್ಪ ಮತ್ತು ಸೋಮಣ್ಣ ಅವರು ಸೂಚಿಸುವವರಿಗೇ ಟಿಕೆಟ್ ನೀಡಿದರಾಯಿತು ಎಂಬ ವಾದವನ್ನು ಯಡಿಯೂರಪ್ಪ ಆಪ್ತರು ಮಂಡಿಸುತ್ತಿದ್ದಾರೆ.