
ಹೈದರಾಬಾದ್(ನ.26): ದೇಶದ ಹಿರಿಯ ಪೊಲೀಸ್ ಮುಖ್ಯಸ್ಥರು, ಕೇಂದ್ರ ಅರೆಸೇನಾ ಪಡೆ ಹಾಗೂ ಗುಪ್ತಚರ ಮುಖ್ಯಸ್ಥರ ಸಮಾವೇಶ ಶನಿವಾರ ಹೈದರಾಬಾದ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದಿದೆ. ಈ ಸಮಾವೇಶದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಒಂದು ಗಂಟೆ ಕಾಲ ಯೋಗಾಭ್ಯಾಸ ನಡೆಸಿ ಗಮನ ಸೆಳೆದರು.
ಶುಕ್ರವಾರವೇ ಆಮಿಸಿದ್ದ ಪ್ರಧಾನಿ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ರಾತ್ರಿ ಕಳೆದರು. ಡಿಜಿಪಿಗಳು, ಐಜಿಪಿಗಳು ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಮುಂಜಾನೆ ಪ್ರಧಾನಿ ಯೋಗಾಭ್ಯಾಸ ನಡೆಸಿದರು.
ಸರ್ದಾರ್ ಪಟೇಲ್ ಮತ್ತು ಹುತಾತ್ಮ ಪೊಲೀಸರಿಗೆ ಅವರು ಶ್ರದ್ಧಾಂಜಲಿ ಅರ್ಪಿಸಿದರು. ಅಕಾಡೆಮಿ ಆವರಣದಲ್ಲಿ ಅವರು ಸಸಿಯೊಂದನ್ನು ನೆಟ್ಟರು. ಬಳಿಕ ಪೊಲೀಸ್ ಅಧಿಕಾರಿಗಳೊಂದಿಗೆ ಬೆಳಗಿನ ಉಪಹಾರ ಸೇವಿಸಿದರು. ಐಪಿಎಸ್ ಅಧಿಕಾರಿಗಳ ತರಬೇತಿ ನಡೆಯುವಲ್ಲಿನ ಸೌಲಭ್ಯಗಳನ್ನೂ ಅವರು ಪರಿಶೀಲಿಸಿದರು. ಬಳಿಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಮೂರು ದಿನಗಳ ಸಮಾವೇಶಕ್ಕೆ ಶುಕ್ರವಾರ ಗೃಹ ಸಚಿವ ರಾಜನಾಥ ಸಿಂಗ್ ಚಾಲನೆ ನೀಡಿದ್ದರು. ಗೃಹ ಖಾತೆಯ ಸಹಾಯಕ ಸಚಿವರಾದ ಕಿರಣ್ ರಿಜಿಜು, ಹಂಸರಾಜ್ ಗಂಗಾರಾಮ್ ಆಹಿರ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಷಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಮತ್ತಿತರ ಪ್ರಮುಖ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.