ಜಗತ್ತಿನ ಅತಿದೊಡ್ಡ ಜೀವವಿಮೆ ಯೋಜನೆ ಜಾರಿಗೊಳಿಸುತ್ತಿರುವುದಾಗಿ ಘೋಷಿಸಿದ್ದ ಪ್ರಧಾನಿ ಮೋದಿ ಸರ್ಕಾರ, ಬಜೆಟ್ನಲ್ಲಿ ದೊಡ್ಡ ಮೊತ್ತವನ್ನು ಈ ಯೋಜನೆಗೆ ಈಗಾಗಲೇ ಘೋಷಿಸಿದೆ.
ನವದೆಹಲಿ: ಜಗತ್ತಿನ ಅತಿದೊಡ್ಡ ಜೀವವಿಮೆ ಯೋಜನೆ ಜಾರಿಗೊಳಿಸುತ್ತಿರುವುದಾಗಿ ಘೋಷಿಸಿದ್ದ ಪ್ರಧಾನಿ ಮೋದಿ ಸರ್ಕಾರ, ಬಜೆಟ್ನಲ್ಲಿ ದೊಡ್ಡ ಮೊತ್ತವನ್ನು ಈ ಯೋಜನೆಗೆ ಈಗಾಗಲೇ ಘೋಷಿಸಿದೆ.
ಆದರೆ, ಯೋಜನೆಯ ಯಶಸ್ಸಿನ ಬಗ್ಗೆ ಆರೋಗ್ಯ ಮತ್ತು ಕುಟುಂಬ ಅಭಿವೃದ್ಧಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಸಂದೇಹ ವ್ಯಕ್ತಪಡಿಸಿದೆ. ಯೋಜನೆಯ ಸಂಭಾವ್ಯ ವೈಫಲ್ಯಗಳ ಬಗ್ಗೆ ಗಮನ ಸೆಳೆದಿದೆ. ಈಗಾಗಲೇ ಇರುವ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ(ಆರ್ಎಸ್ಬಿವೈ)ಗೆ 975 ಕೋಟಿ ರು. ಅನುದಾನ ಘೋಷಿಸಲಾಗಿತ್ತು. ಆದರೆ, ವರ್ಷ ಸಾಗುತ್ತಿದ್ದಂತೆ ಅದನ್ನು 565 ಕೋಟಿ ರು.ಗೆ ಇಳಿಕೆ ಮಾಡಲಾಗಿತ್ತು.
ಅದರಲ್ಲಿ ಬಿಡುಗಡೆ ಆಗಿದ್ದೂ ಕೇವಲ 450 ಕೊಟಿ ರು. ಮಾತ್ರ. ಆರ್ಎಸ್ಬಿವೈಗೆ ಅರ್ಹರಲ್ಲಿ ಶೇ. 57 ಮಂದಿ ಮಾತ್ರ ನೋಂದಾಯಿತರಾಗಿದ್ದರು, ಅವರಲ್ಲಿ ಶೇ. 12ಕ್ಕೂ ಕಡಿಮೆ ಮಂದಿ ಆರ್ಎಸ್ಬಿವೈ ಮುಖೇನ ಆಸ್ಪತ್ರೆ ವೆಚ್ಚ ಪಡೆದುಕೊಂಡಿದ್ದಾರೆ. ಆರ್ಎಸ್ಬಿವೈ ಬಗ್ಗೆ ಅಧ್ಯಯನಕ್ಕೊಳಪಟ್ಟಬಹುತೇಕ ರಾಜ್ಯಗಳಲ್ಲಿ, ಯೋಜನೆಗೆ ಸಂಬಂಧಿಸಿದ ಖರ್ಚು ಹೆಚ್ಚಾಗಿದೆ, ಕೇವಲ 2 ರಾಜ್ಯಗಳಲ್ಲಿ ಮಾತ್ರ ಖರ್ಚು ಕಡಿಮೆಯಾಗಿದೆ.
ಹೀಗಾಗಿ ಆರ್ಎಸ್ಬಿವೈನ ವೈಫಲ್ಯಗಳನ್ನು ಪತ್ತೆಹಚ್ಚಿ, ಈಗ ಜಾರಿಗೊಳಿಸಲುದ್ದೇಶಿಸಿರುವ ಹೊಸ ಯೋಜನೆಯಲ್ಲಿ ಮರುಕಳಿಸದಂತೆ ನೋಡಿಕೊಳ್ಳಲು ಸಮಿತಿ ಸಲಹೆ ನೀಡಿದೆ. 10 ಕೋಟಿ ಜನರಿಗೆ ಅನ್ವಯವಾಗುವ, ತಲಾ 5 ಲಕ್ಷ ರು. ವಿಮೆ ಮೊತ್ತ ಪಡೆಯಬಹುದಾದ ಯೋಜನೆ ಸರ್ಕಾರ ಘೋಷಿಸಿದೆ.