
ಚೆನ್ನೈ(ಫೆ.20): ತಮಿಳುನಾಡು ಮುಖ್ಯಮಂತ್ರಿಯಾಗಿ ಕಾರ್ಯಾರಂಭಿಸಿರುವ ಎಡಪ್ಪಾಡಿ ಪಳನಿಸ್ವಾಮಿ, ಅಣ್ಣಾಡಿಎಂಕೆಯ ದಿವಂಗತ ನಾಯಕ ಜೆ. ಜಯಲಲಿತಾ ಅವರು 2016ರ ಚುನಾವಣೆ ವೇಳೆ ನೀಡಿದ್ದ ಎರಡು ಪ್ರಮುಖ ಭರವಸೆಗಳನ್ನು ಈಡೇರಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಟಾಸ್ಮಾಕ್ ಸಂಸ್ಥೆ ನಡೆಸುತ್ತಿರುವ 500 ಮದ್ಯದಂಗಡಿಗಳನ್ನು ಮುಚ್ಚಿಸುವುದರ ಜತೆಗೆ, ಉದ್ಯೋಗಸ್ಥ ಮಹಿಳೆಯರಿಗೆ ಶೇ.50ರ ರಿಯಾಯಿತಿ (ಗರಿಷ್ಠ 20 ಸಾವಿರ ರು. ಸಬ್ಸಿಡಿ) ದರದಲ್ಲಿ ಸ್ಕೂಟರ್ ಒದಗಿಸುವ ‘ಅಮ್ಮಾ ದ್ವಿಚಕ್ರ ವಾಹನ’ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ತಮಿಳುನಾಡಿನಲ್ಲಿ ಪಾನ ನಿಷೇಧ ಜಾರಿಗೊಳಿಸುವ ನಿಟ್ಟಿನಲ್ಲಿ ಮದ್ಯದಂಗಡಿಗಳನ್ನು ಹಂತಹಂತವಾಗಿ ಮುಚ್ಚಿಸುವ ಭರವಸೆಯನ್ನು 2016ರ ಚುನಾವಣಾ ಪ್ರಣಾಳಿಕೆಯಲ್ಲಿ ಜಯಲಲಿತಾ ನೀಡಿದ್ದರು. ಅದರ ಭಾಗವಾಗಿ ಅಧಿಕಾರಕ್ಕೇರುತ್ತಿದ್ದಂತೆ 500 ಅಂಗಡಿಗಳ ಬಾಗಿಲು ಹಾಕಿಸಿದ್ದರು. ಇದೀಗ ಪಳನಿಸ್ವಾಮಿ ಕೂಡ 500 ಮದ್ಯದಂಗಡಿ ಮುಚ್ಚಿಸುವುದರೊಂದಿಗೆ ತಮಿಳುನಾಡಿನಲ್ಲಿದ್ದ ಮದ್ಯದಂಗಡಿಗಳ ಸಂಖ್ಯೆ 6000ದಿಂದ 5000ಕ್ಕೆ ಇಳಿಕೆಯಾಗಿದೆ.
ಇದೇ ವೇಳೆ, ಗರ್ಭಿಣಿಯರ ಸಹಾಯಧನವನ್ನು 12 ಸಾವಿರ ರು.ನಿಂದ 18 ಸಾವಿರಕ್ಕೆ ಹೆಚ್ಚಿಸಿದ್ದಾರೆ. ಮೀನುಗಾರರಿಗೆ ವಿಶೇಷ ವಸತಿ ಯೋಜನೆ ಘೋಷಿಸುವುದರ ಜತೆಗೆ ನಿರುದ್ಯೋಗ ಭತ್ಯೆಗಳನ್ನು ದ್ವಿಗುಣಗೊಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.