
ಇಂಫಾಲ(ಮಾ.13): ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಐತಿಹಾಸಿಕ ಬಹುಮತ ಗಳಿಸಿದ ಬಿಜೆಪಿ, ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ಮಣಿಪುರದಲ್ಲೂ ಸರ್ಕಾರ ರಚನೆಗೆ ತಂತ್ರಗಾರಿಕೆ ರೂಪಿಸತೊಡಗಿದ್ದು, ಈಶಾನ್ಯ ಭಾಗದ ಪುಟ್ಟ ರಾಜ್ಯ ಭಾರೀ ರಾಜಕೀಯ ನಾಟಕೀಯ ವಿದ್ಯಮಾನಗಳಿಗೆ ನಾಂದಿ ಹಾಡಿದೆ.
60 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸೀಟು ಬೇಕಿದ್ದು, ಕಾಂಗ್ರೆಸ್ 28 ಹಾಗೂ ಬಿಜೆಪಿ 21 ಸ್ಥಾನ ಹೊಂದಿದೆ. 4 ಶಾಸಕರಿರುವ ನಾಗಾ ಪೀಪಲ್ ಪಾರ್ಟಿ (ಎನ್ಪಿಪಿ), 4 ಸದಸ್ಯರ ನಾಗಾ ಪೀಪಲ್ಸ್ ್ರಂಟ್ (ಎನ್ಪಿಎ್), ಓರ್ವ ಎಲ್ಜೆಪಿ, ಓರ್ವ ತೃಣಮೂಲ ಕಾಂಗ್ರೆಸ್ ಶಾಸಕ ಬಿಜೆಪಿಯನ್ನು ಬೆಂಬಲಿಸಿದ್ದು, ಬಹುಮತದ ಗೆರೆಯಾದ 31 ಸ್ಥಾನಗಳು ಬಿಜೆಪಿಗೆ ಸಿಕ್ಕಿವೆ. ಇದೇ ವೇಳೆ, ಶ್ಯಾಮಕುಮಾರ್ ಸಿಂಗ್ ಎಂಬ ಓರ್ವ ಕಾಂಗ್ರೆಸ್ ಶಾಸಕ ‘ಆಪರೇಶನ್ ಕಮಲ’ದ ಪ್ರಭಾವಕ್ಕೊಳಗಾಗಿ ಬಿಜೆಪಿಗೆ ಹಾರಿದ್ದಾರೆ. ಇದರಿಂದಾಗಿ ಬಿಜೆಪಿಗೆ 32 ಶಾಸಕರ ಬೆಂಬಲ ದೊರೆತಂತಾಗಿದೆ.
ಇದೇ ವೇಳೆ, ಏಕೈಕ ಪಕ್ಷೇತರ ಮುಸ್ಲಿಂ ಶಾಸಕ ಅಶಾಬುದ್ದೀನ್ಗೂ ಬಿಜೆಪಿ ಗಾಳ ಹಾಕತೊಡಗಿದ್ದು, ಅವರು ‘ನಾಪತ್ತೆ’ ಆಗಿದ್ದಾರೆ ಎಂಬ ಗುಲ್ಲು ಹರಡಿದೆ.
‘ಬಿಜೆಪಿಗೆ 32 ಶಾಸಕರ ಬೆಂಬಲ ಇದೆ. ಸರ್ಕಾರ ರಚನೆಗೆ ರಾಜ್ಯಪಾಲರಲ್ಲಿ ಅವಕಾಶ ಕೋರಿದ್ದೇವೆ’ ಎಂದು ರಾಜ್ಯದ ಬಿಜೆಪಿ ವೀಕ್ಷಕರಾದ ಅಸ್ಸಾಂ ಸಚಿವ ಹಿಮಂತ ಬಿಸ್ವ ಶರ್ಮಾ ಭಾನುವಾರ ತಡರಾತ್ರಿ ಖಚಿತಪಡಿಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್ ಹಾಗೂ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದಲ್ಲಿ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.
ಸ್ಥಾನಗಳಿಕೆಯಲ್ಲಿ ಹಿಂದಿದ್ದರೂ, ಶೇಕಡಾವಾರು ಮತ ಗಳಿಕೆಯಲ್ಲಿ ಕಾಂಗ್ರೆಸ್ಸಿಗಿಂತ ಮುಂದಿರುವ ಕಾರಣಕ್ಕೆ ಬಿಜೆಪಿ ಸರ್ಕಾರ ರಚಿಸುವ ತವಕದಲ್ಲಿದೆ. ಆದರೆ ಬಿಜೆಪಿ ನಡೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ, ‘ಕುದುರೆ ವ್ಯಾಪಾರದ ಮೂಲಕ ಪ್ರಜಾಸತ್ತೆಯ ಕತ್ತು ಹಿಸುಕಲು ಬಿಜೆಪಿ ಹೊರಟಿದೆ. ರಾಜ್ಯಪಾಲರು, ಚಮಚಾಗಳ ಮೂಲಕ ಈ ಕೃತ್ಯ ಎಸಗುತ್ತಿದೆ’ ಎಂದಿದ್ದಾರೆ.
ಸಿಎಂ ಯಾರು?:
ಈ ನಡುವೆ ಸಿಎಂ ಸ್ಥಾನಕ್ಕೆ ಬಿಜೆಪಿಯಲ್ಲಿ ಈಗಾಗಲೇ ಬಿರೇನ್ ಸಿಂಗ್ ಹಾಗೂ ಬಿಸ್ವಜಿತ್ ಸಿಂಗ್ ಅವರ ಹೆಸರು ಮುಂಚೂಣಿಯಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.