
ನವದೆಹಲಿ[ಜೂ.16]: 17ನೇ ಲೋಕಸಭೆಯ ಮೊದಲ ಅಧಿವೇಶನ ಜೂ.17ರಿಂದ ಆರಂಭವಾಗುತ್ತಿದೆ. ಈ ಬಾರಿಯ ವಿಶೇಷವೆಂದರೆ, ಸಂಸತ್ತಿನ ಉಭಯ ಸದನಗಳಲ್ಲೂ ಒಬ್ಬರೇ ಒಬ್ಬರು ಮಾಜಿ ಪ್ರಧಾನಿಯೂ ಇಲ್ಲ.
ಪ್ರತಿ ಬಾರಿ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಒಬ್ಬರಾದರೂ ಮಾಜಿ ಪ್ರಧಾನಿ ಇರುತ್ತಿದ್ದರು. ಆದರೆ ಈ ಸಲ ಒಬ್ಬರೂ ಇಲ್ಲ. 16ನೇ ಲೋಕಸಭೆಯ ಅವಧಿಯಲ್ಲಿ ಎಚ್.ಡಿ. ದೇವೇಗೌಡ ಲೋಕಸಭೆಯಲ್ಲಿದ್ದರೆ, ಮನಮೋಹನ ಸಿಂಗ್ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ದೇವೇಗೌಡ 13 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಏತನ್ಮಧ್ಯೆ, 1991ರಿಂದ ನಿರಂತರವಾಗಿ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದ ಮನಮೋಹನ ಸಿಂಗ್ ಅವರು ಕಾಂಗ್ರೆಸ್ಸಿಗೆ ಸಂಖ್ಯಾಬಲ ಕೊರತೆ ಇರುವುದರಿಂದ ರಾಜ್ಯಸಭೆಗೆ ಪುನರಾಯ್ಕೆಯಾಗದಂತಾಗಿದೆ. ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾಗಲು 43 ಶಾಸಕರ ಪ್ರಥಮ ಆದ್ಯತೆ ಮತಗಳು ಬೇಕು. ಆದರೆ ಕಾಂಗ್ರೆಸ್ ಅಸ್ಸಾಂನಲ್ಲಿ ಕೇವಲ 25 ಸದಸ್ಯರನ್ನು ಮಾತ್ರವೇ ಹೊಂದಿದೆ. ಕಾಂಗ್ರೆಸ್ ಆಳ್ವಿಕೆಯಿಂದ ಬೇರೆ ರಾಜ್ಯಗಳಿಂದ ಮನಮೋಹನ್ ಅವರನ್ನು ಆಯ್ಕೆ ಮಾಡಬಹುದಾದರೂ, ಯಾವುದೇ ಸ್ಥಾನಗಳು ಖಾಲಿ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.