ಬಿಡದಿಯ ನಿತ್ಯಾನಂದ ಸ್ವಾಮೀಜಿ ತಮ್ಮ ಗುರುಗಳನ್ನು ಅಪಹರಿಸಿದ್ದಾರೆ ಎಂದು ಆಪಾದಿಸಿ ಕಂಚೀಪುರಂನ ತೊಂಡೈ ಮಂಡಲ ಆಧೀನಂ ಜ್ಞಾನಪ್ರಕಾಶ ಮಠದ ಹಿಂಬಾಲಕರು ಪೊಲೀಸ್ ದೂರು ದಾಖಲಿಸಿದ್ದಾರೆ. ಆದರೆ ಸ್ವಾಮೀಜಿ ಜ್ಞಾನಪ್ರಕಾಶ ದೇಸಿಗರ್ ಪ್ರಸ್ತುತ ಬೆಂಗಳೂರಿನಲ್ಲಿದ್ದಾರೆ, ಶೀಘ್ರವೇ ಕಂಚೀಪುರಂಗೆ ಮರಳಲಿದ್ದಾರೆ ಎಂದು ಪೊಲೀಸರು ತನಿಖೆ ನಡೆಸಿದ ಬಳಿಕ ದೃಢಪಡಿಸಿದ್ದಾರೆ.
ಕಂಚೀಪುರಂ(ಆ.02): ಬಿಡದಿಯ ನಿತ್ಯಾನಂದ ಸ್ವಾಮೀಜಿ ತಮ್ಮ ಗುರುಗಳನ್ನು ಅಪಹರಿಸಿದ್ದಾರೆ ಎಂದು ಆಪಾದಿಸಿ ಕಂಚೀಪುರಂನ ತೊಂಡೈ ಮಂಡಲ ಆಧೀನಂ ಜ್ಞಾನಪ್ರಕಾಶ ಮಠದ ಹಿಂಬಾಲಕರು ಪೊಲೀಸ್ ದೂರು ದಾಖಲಿಸಿದ್ದಾರೆ. ಆದರೆ ಸ್ವಾಮೀಜಿ ಜ್ಞಾನಪ್ರಕಾಶ ದೇಸಿಗರ್ ಪ್ರಸ್ತುತ ಬೆಂಗಳೂರಿನಲ್ಲಿದ್ದಾರೆ, ಶೀಘ್ರವೇ ಕಂಚೀಪುರಂಗೆ ಮರಳಲಿದ್ದಾರೆ ಎಂದು ಪೊಲೀಸರು ತನಿಖೆ ನಡೆಸಿದ ಬಳಿಕ ದೃಢಪಡಿಸಿದ್ದಾರೆ.
ಕೆಲವು ತಿಂಗಳ ಹಿಂದೆ ನಿತ್ಯಾನಂದ ಸ್ವಾಮೀಜಿಯ ಹಿಂಬಾಲಕರಿಗೆ ಜ್ಞಾನಪ್ರಕಾಶ ಸ್ವಾಮೀಜಿ ಮಠದಲ್ಲಿ ಉಳಿದು ಕೊಳ್ಳಲು ಅವಕಾಶ ನೀಡಿದ ಬಳಿಕ ಎರಡು ಗುಂಪುಗಳ ನಡುವೆ ಸಮಸ್ಯೆಗಳು ಆರಂಭವಾಗಿದ್ದವು. ಈ ಸಂಬಂಧ ಜು. 30ರಂದು ಮಠದ ಭಕ್ತರ ಸಭೆ ನಡೆಸುವಂತೆ ತೊಂಡೈ ಮಂಡಲ ಅಧೀನಂನ ಹಿಂಬಾಲಕರು ತಮ್ಮ ಧಾರ್ಮಿಕ ನಾಯಕನಲ್ಲಿ ವಿನಂತಿಸಿದ್ದರು.
ಸಭೆಗಾಗಿ ಭಕ್ತರು ಜಮಾಯಿಸಿದಾಗ, ಅಲ್ಲಿ ಬೀಗ ಜಡಿದಿರುವುದು ಗಮನಕ್ಕೆ ಬಂತು. ಈ ಸಂಬಂಧ ತಮ್ಮ ಧಾರ್ಮಿಕ ಗುರುವಿಗೆ ಫೋನ್ ಸಂಪರ್ಕ ನಡೆಸಿದಾಗ, ಅವರ ಫೋನ್ ಸಂಪರ್ಕ ಸಿಕ್ಕಿರಲಿಲ್ಲ. ಹೀಗಾಗಿ ಅವರು ಅಧಿಕೃತ ಪೊಲೀಸ್ ದೂರು ದಾಖಲಿಸಿದರು ಎನ್ನಲಾಗಿದೆ.