ಕಾರವಾರ ಬಂದರಿನಲ್ಲಿ INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ| ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದ ತಂಡದ ನೇತೃತ್ವ ವಹಿಸಿದ್ದ ನೌಕಾಧಿಕಾರಿ ಸಾವು|
ಕಾರವಾರ[ಏ.26]: ಭಾರತದ ನೌಕಾಸೇನೆಯ ಯುದ್ಧನೌಕೆ INS ವಿಕ್ರಮಾದಿತ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ನಂದಿಸುವ ಕಾರ್ಯದ ನೇತೃತ್ವ ವಜಹಿಸಿದ್ದ ನೌಕಾಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಡಿಎಸ್ ಚೌಹಾಣ್ ಸಾವನ್ನಪ್ಪಿದ್ದಾರೆ.
ಕಾರವಾರದ ಬಂದರಿನಲ್ಲಿದ್ದ ಯುದ್ಧನೌಕೆ INS ವಿಕ್ರಮಾದಿತ್ಯದಲ್ಲಿ ಇಂದು ಶುಕ್ರವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ನಂದಿಸುತ್ತಿದ್ದ ತಂಡದ ನೇತೃತ್ವ ವಹಿಸಿಕೊಂಡಿದ್ದ ನೌಕಾಧಿಕಾರಿ ಡಿಎಸ್ ಚೌಹಾಣ್ ನೌಕೆಯಲ್ಲಿ ಹಬ್ಬಿಕೊಂಡಿದ್ದ ದಟ್ಟ ಹೊಗೆಯಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ನಗರದ ನೌಕಾಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ನೌಕಾದಳದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ನೌಕಾಧಿಕಾರಿಗಳು 'ನೌಕೆಯಲ್ಲಿ ವ್ಯಾಪಿಸಿದ್ದ ಬೆಂಕಿ ನಿಯಂತ್ರಿಸಲು ತಂಡ ಯಶಸ್ವಿಯಾಗಿದೆ. ಇನ್ನು ಈ ಅನಾಹುತ ಸಂಭವಿಸಲು ಕಾರಣವೇನು ಎಂದು ತಿಳಿದು ಬಂದಿಲ್ಲವಾದರೂ, ಈ ಕುರಿತಾಗಿ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಹಡಗಿನ ಸಾಮರ್ಥ್ಯಕ್ಕೆ ಯಾವುದೇ ಹಾನಿಯಾಗದಂತೆ ಕ್ರಮ ಕೈಗೊಂಡಿದ್ದೇವೆ' ಎಂದಿದ್ದಾರೆ.
INS ವಿಕ್ರಮಾದಿತ್ಯ ಯುದ್ಧ ನೌಕೆಯನ್ನು 2014ರಲ್ಲಿ ರಷ್ಯಾದಿಂದ ತರಿಸಿಕೊಳ್ಳಲಾಗಿತ್ತು. 284 ಮೀ ಉದ್ದ ಹಾಗೂ 60 ಮೀ ಅಗಲವಿರುವ ಈ ಯುದ್ಧನೌಕೆ ಒಟ್ಟು 40 ಸಾವಿರ ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಇದು ಭಾರತದ ಅತಿ ದೊಡ್ಡ ಯುದ್ಧ ನೌಕೆಯಾಗಿದೆ.