ಮುಸ್ಲಿಂ ನಾಯಕರು ರಾಮ ಮಂದಿರ ನಿರ್ಮಾಣಕ್ಕೆ ಜಾಗ ನೀಡಲು ಮುಂದಾಗಿದ್ದಾರೆ. ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಇದು ಸೂಕ್ತ ಸಮಯ. ಇಂಥ ಯಾವುದೇ ಮಾತುಕತೆಗೆ ವೇದಿಕೆ ಕಲ್ಪಿಸಲು ಸಿದ್ಧ ಎಂದು ಯೋಗಿ ಹೇಳಿದರು.
ಅಯೋಧ್ಯೆ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬುಧವಾರ ಅಯೋಧ್ಯೆಯ ರಾಮಜನ್ಮಭೂಮಿಗೆ ಭೇಟಿ ನೀಡಿ, ತಾತ್ಕಾಲಿಕ ರಾಮಮಂದಿರದಲ್ಲಿರುವ ರಾಮಲಲ್ಲಾನ ದರ್ಶನ ಪಡೆದರು. ಯೋಗಿ ಸಿಎಂ ಹುದ್ದೆ ವಹಿಸಿಕೊಂಡ ಬಳಿಕ ಅಯೋಧ್ಯೆಗೆ ಭೇಟಿ ನೀಡಿದ್ದು ಇದೇ ಮೊದಲು. ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಮರುವಿಚಾರಣೆ ಆರಂಭವಾಗಿ ಬಿಜೆಪಿ ಮುಖಂಡರ ಮೇಲೆ ದೋಷಾರೋಪ ಹೊರಿಸಿದ ಮಾರನೇ ದಿನವೇ ಆದಿತ್ಯನಾಥ್ ಅವರು ವಿವಾದಿತ ಸ್ಥಳಕ್ಕೆ ಭೇಟಿ ನೀಡಿರುವುದು ವಿಶೇಷ.
ಈ ವೇಳೆ ಮಾತನಾಡಿದ ಯೋಗಿ, ಮುಸ್ಲಿಂ ನಾಯಕರು ರಾಮ ಮಂದಿರ ನಿರ್ಮಾಣಕ್ಕೆ ಜಾಗ ನೀಡಲು ಮುಂದಾಗಿದ್ದಾರೆ. ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಇದು ಸೂಕ್ತ ಸಮಯ. ಇಂಥ ಯಾವುದೇ ಮಾತುಕತೆಗೆ ವೇದಿಕೆ ಕಲ್ಪಿಸಲು ಸಿದ್ಧ ಎಂದು ಹೇಳಿದರು.
ಬೆಳಗ್ಗೆ ಅಯೋಧ್ಯೆಗೆ ಆಗಮಿಸಿದ ಆದಿತ್ಯನಾಥ್, ಮೊದಲು ಹನುಮಾನ್ಗಢಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ನಂತರ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಆವರಣದಲ್ಲಿರುವ ತಾತ್ಕಾಲಿಕ ಮಂದಿರದಲ್ಲಿ ಸುಮಾರು 30 ನಿಮಿಷ ಕಾಲ ಕಳೆದರು.