
ಮುಂಬೈ(ಜೂ.17): ರಸ್ತೆಯಲ್ಲಿ ಕಸ ಚೆಲ್ಲಿದ್ದ ಯುವಕನಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮ ಸ್ವಚ್ಛತೆಯ ಪಾಠ ಹೇಳಿದ್ದ ಘಟನೆ ಭಾರೀ ವಿವಾದ ಸೃಷ್ಟಿಸುತ್ತಿದೆ. ಕ್ರಿಕೆಟಿಗ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ್ದ ವಿಡಿಯೋಗೆ ಹಲವರಿಂದ ಕುಹುಕದ ಪ್ರತಿಕ್ರಿಯೆ ಬರುತ್ತಿವೆ.
ಇದರಿಂದ ರೊಚ್ಚಿಗೆದ್ದಿರುವ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಟ್ವಿಟರ್ ನಲ್ಲಿ ಕುಹುಕವಾಡುತ್ತಿರುವವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬದಲಾವಣೆ ತರಲು ಧೈರ್ಯ ಇಲ್ಲದವರು ಈ ರೀತಿ ಕುಹುಕವಾಡುತ್ತಾರೆ ಎಂದು ಗುಡುಗಿರುವ ಕೊಹ್ಲಿ, ಎಲ್ಲವನ್ನೂ ವಿವಾದದ ದೃಷ್ಟಿಯಿಂದಲೇ ನೋಡುವ ಮನಸ್ಸುಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹರಿಹಾಯ್ದಿದ್ದಾರೆ.
ಅನುಷ್ಕಾ ವಿಡಿಯೋವನ್ನು ಹಲವರು ಟ್ರೋಲ್ ಮಾಡಿದ್ದು, ವಿವಿಧ ರೀತಿಯ ಪ್ರತಿಕ್ರಿಯೆ ನೀಡಿದ್ದರು. ಇದರಿಂದ ರೋಸಿ ಹೋದ ವಿರಾಟ್, ಬದಲಾವಣೆ ತರಲಾಗದಿದ್ದರೆ ತೆಪ್ಪಗಿರಿ ಎಂದು ಟ್ರೋಲ್ ಮಾಡುವವರ ಬಾಯಿ ಮುಚ್ಚಿಸಿದ್ದಾರೆ.
ಇದೇ ವೇಳೆ ವಿರಾಟ್ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಅರ್ಹಾನ್ ಸಿಂಗ್ ತಾಯಿ, ನಿಮ್ಮ ಪಬ್ಲಿಸಿಟಿ ಹುಚ್ಚಿಗೆ ನನ್ನ ಮಗನ ಹೆಸರು ಹಾಳು ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ. ನನ್ನ ಮಗ ಪ್ಲಾಸ್ಟಿಕ್ ಕಸವನ್ನು ರಸ್ತೆಗೆ ಚೆಲ್ಲಿದ ಕುರಿತು ಸಾಕ್ಷಿ ಇದೆಯೇ ಎಂದು ಪ್ರಶ್ನಿಸಿರುವ ತಾಯಿ ಗೀತಾಂಜಲಿ ಎಲಿಜೆಬೆತ್, ಸಾರ್ವಜನಿಕವಾಗಿ ನನ್ನ ಮಗನನ್ನು ಅಪರಾಧಿ ಎಂಬಂತೆ ಬಿಂಬಿಸಿರುವುದು ತರವಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಶೇರ್ ಮಾಡಿದ್ದ ಅನುಷ್ಕಾ ವಿಡಿಯೋ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಈ ಎಲ್ಲದರ ಮಧ್ಯೆ ಸ್ವಚ್ಛ ಭಾರತ ಅಭಿಯಾನ ಹಿನ್ನೆಲೆಗೆ ಸರಿದಿದ್ದು ಮಾತ್ರ ವಿಪರ್ಯಾಸ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.