ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರ ಓಲೈಕೆಗೆ ಮುಂದಾಗಿರುವ ಕೇಂದ್ರ ಸರ್ಕಾರವು ಇದೀಗ ಅವರೊಂದಿಗೆ ಲೋಕಪಾಲ ಕುರಿತು ಸಭೆಗೆ ದಿನಾಂಕ ನಿಗದಿಪಡಿಸುವಂತೆ ಸಲಹೆ ಕೇಳಿದೆ.
ನವದೆಹಲಿ: ‘ಲೋಕಪಾಲ ನೇಮಕಕ್ಕೆ ಕಾಲಮಿತಿ ತಿಳಿಸಬೇಕು’ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಜುಲೈ 17ರ ಗಡುವು ವಿಧಿಸಿತ್ತು.
ಇದರ ಬೆನ್ನಲ್ಲೇ ಲೋಕಪಾಲ ನೇಮಕ ಸಮಿತಿ ವಿಶೇಷ ಆಹ್ವಾನಿತ ಸದಸ್ಯರಾಗಿರುವ ಲೋಕಸಭೆಯ ಕಾಂಗ್ರೆಸ್ ನೇತಾರ ಮಲ್ಲಿಕಾರ್ಜುನ ಖರ್ಗೆ ಅವರ ಓಲೈಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಈ ಕುರಿತು ಸಭೆಗೆ ದಿನಾಂಕ ನಿಗದಿಪಡಿಸುವಂತೆ ಸಲಹೆ ಕೇಳಿದೆ.
ಈ ಹಿಂದೆ ಮಾ.1 ಹಾಗೂ ಏಪ್ರಿಲ್ 10ರಂದು ನಡೆದ ಸಭೆಗಳಿಗೆ ಖರ್ಗೆ ಗೈರು ಹಾಜರಾಗಿದ್ದರು. ಸರ್ಕಾರವು ತಮ್ಮನ್ನು ವಿಶೇಷ ಆಮಂತ್ರಿತ ಎಂದು ಕರೆದಿದೆಯೇ ವಿನಾ, ವಿಪಕ್ಷ ನಾಯಕನಾಗಿ ಅಲ್ಲ. ತಮ್ಮ ಸಲಹೆಗೆ ಯಾವುದೇ ಪ್ರಾಮುಖ್ಯತೆ ಇರದ ಕಾರಣ ಬಹಿಷ್ಕರಿಸುತ್ತಿರುವುದಾಗಿ ಹೇಳಿದ್ದರು. ಪ್ರತಿಪಕ್ಷಗಳ ಮಾತನ್ನು ನಡೆಯಲು ಸರ್ಕಾರ ಬಿಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಇಂಥ ಸ್ಥಿತಿ ಮರುಕಳಿಸದಂತಾಗಲು ಸರ್ಕಾರವು ಈಗ ಖರ್ಗೆ ಅವರ ಮನೆಯ ಕದ ತಟ್ಟಿದ್ದು, ಅವರು ಸಭೆಯಲ್ಲಿ ಹಾಜರಾಗುವಂತೆ ಯತ್ನಿಸುತ್ತಿದೆ. ಮುಂದಿನ ವಾರ ಲೋಕಪಾಲ ನೇಮಕ ಸಮಿತಿ ಸಭೆ ಸೇರುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.