ಮಧ್ಯರಾತ್ರಿ ಜಿಎಸ್‌ಟಿ ಬಿಲ್ ಪಾಸ್ ಮಾಡಿಸಿದ್ದ ಅನಂತ್ ಕುಮಾರ್

By Web DeskFirst Published Nov 12, 2018, 10:16 AM IST
Highlights

ಐತಿಹಾಸಿಕ ಜಿಎಸ್‌ಟಿ ಮಸೂದೆಗೆ ಸಂಸತ್ತಿನಲ್ಲಿ ಎರಡೂ ಸದನಗಗಳಲ್ಲಿ ಮಧ್ಯರಾತ್ರಿಯೇ ಪಾಸ್ ಮಾಡಿದ ಶ್ರೇಯಸ್ಸು ಅನಂತ್ ಕುಮಾರ್‌ರವರಿಗೂ ಸಲ್ಲುತ್ತದೆ. ಪಕ್ಷಗಳನ್ನು ಓಲೈಸುವ ಕೌಶಲ್ಯ ಅವರಿಗೆ ತುಂಬಾ ಚೆನ್ನಾಗಿ ತಿಳಿದಿತ್ತು. ಹೀಗಾಗೇ ಅವರು ಬಿಲ್ ಪಾಸ್ ಆಗುತ್ತಿದ್ದಂತೆಯೇ ಹಣಕಾಸು ಸಚಿವರೊಂದಿಗೆ ಸೇರಿ ಅದನ್ನು ಕೇವಲ ಮೂರೇ ವಾರದೊಳಗೆ ದೇಶದ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಜಾರಿಯಾಗುವಂತೆ ಮಾಡಿದ್ದರು.

ಬೆಂಗಳೂರು(ನ.11): ಕೇಂದ್ರದ ಮೋದಿ ಸರ್ಕಾರದ ಪ್ರಮುಖ ಸಚಿವರಾಗಿದ್ದ ಅನಂತ್ ಕುಮಾರ್ ಇಂದು ಮುಂಜಾನೆ ನಿಧನರಾಗಿದ್ದಾರೆ. 56 ವರ್ಷದ ಅನಂತ್ ಕುಮಾರ್‌ರವರು ದೀರ್ಘ ಸಮಯದಿಂದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ನ್ಯೂಯಾರ್ಕ್‌ನಿಂದ ಮರಳಿದ್ದ ಅವರು ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಶಂಕರ ಕ್ಯಾನ್ಸರ್ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

1996 ರಲ್ಲಿ ದಕ್ಷಿಣ ಬೆಂಗಳೂರು ಕ್ಷೇತ್ರದಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದ ಅನಂತ್ ಕುಮಾರ್ ಬಳಿ ಎರಡು ಪ್ರಮುಖ ಖಾತೆಗಳ ಜವಾಬ್ದಾರಿ ವಹಿಸಿಕೊಂಡಿದ್ದರು. 2014ರಲ್ಲಿ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಸ್ಥಾನವನ್ನು ಅನಂತ್ ಕುಮಾರ್‌ರವರಿಗೆ ನೀಡಲಾಗಿತ್ತು. ಇದನ್ನು ಹೊರತುಪಡಿಸಿ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾದ ಬಳಿಕ ಜುಲೈ 2016 ರಲ್ಲಿ ಅವರನ್ನು ಸಂಸದೀಯ ವ್ಯವಹಾರಗಳ ಜವಾಬ್ದಾರಿಯನ್ನೂ ವಹಿಸಲಾಯಿತು. 

ಐತಿಹಾಸಿಕ ಜಿಎಸ್‌ಟಿ ಮಸೂದೆಗೆ ಸಂಸತ್ತಿನ ಎರಡೂ ಸದನಗಗಳಲ್ಲಿ ಮಧ್ಯರಾತ್ರಿಯೇ ಪಾಸ್ ಮಾಡಿದ ಶ್ರೇಯಸ್ಸು ಅನಂತ್ ಕುಮಾರ್‌ರವರಿಗೂ ಸಲ್ಲುತ್ತದೆ. ಪಕ್ಷಗಳನ್ನು ಓಲೈಸುವ ಕೌಶಲ್ಯ ಅವರಿಗೆ ತುಂಬಾ ಚೆನ್ನಾಗಿ ತಿಳಿದಿತ್ತು. ಹೀಗಾಗೇ ಅವರು ಬಿಲ್ ಪಾಸ್ ಆಗುತ್ತಿದ್ದಂತೆಯೇ ಹಣಕಾಸು ಸಚಿವರೊಂದಿಗೆ ಸೇರಿ ಇದನ್ನು ಕೇವಲ ಮೂರೇ ವಾರದೊಳಗೆ ದೇಶದ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಜಾರಿಗೊಳಿಸುವಂತೆ ಮಾಡಿದ್ದರು. 

ವಿದ್ಯಾರ್ಥಿ ನಾಯಕನಿಂದ ಕೇಂದ್ರ ಸಚಿವರಾದ ಪಯಣ

ಅನಂತ್ ಕುಮಾರ್ ರವರು ಆರ್‌ಎಸ್‌ಎಸ್‌ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದರು ಹಾಗೂ ವಿದ್ಯಾರ್ಥಿಯಾಗಿದ್ದಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ಸಂದರ್ಭದಲ್ಲಿ ಜೈಲಿಗೂ ತೆರಳಿದ್ದರು. ಇದಾದ ಬಳಿಕ ಅವರು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಹಾಗೂ 1985ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿದ್ದರು. ಇದಾದ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡ ಅವರು ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರಾದರು. 1996 ರಲ್ಲಿ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿಯವರ ಮೊದಲ ಸರ್ಕಾರದಲ್ಲಿ ಅನಂತ್ ಕುಮಾರ್ ನಾಗರಿಕ ವಿಮಾನ ಖಾತೆ ಸಚಿವರಾಗಿದ್ದರು. ಈ ಮೂಲಕ ಅವರು ಆ ಸಂಪುಟದ ಅತ್ಯಂತ ಕಿರಿಯ ಸಚಿವರೆಂದು ಗುರುತಿಸಿಕೊಂಡರು. ಇದಾದ ಬಳಿಕ ಮತ್ತೊಮ್ಮೆ ಅಧಿಕಾರ ಪಡೆದ ವಾಜಪೇಯಿ ಸರ್ಕಾರದಲ್ಲಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಲಾಗಿತ್ತು. ಈ ವೇಳೆ ಅವರಲ್ಲಿ ಪ್ರವಾಸೋದ್ಯಮ, ಕ್ರೀಡೆ ಹಾಗೂ ಯುವ ವ್ಯವಹಾರ, ಸಂಸ್ಕೃತಿ, ನಗರಾಭಿವೃದ್ಧಿ ಹಾಗೂ ಬಡತನ ನಿವಾರಿಸಿ ಹೀಗೆ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ.

click me!