ಮಹಾರಾಷ್ಟ್ರದಲ್ಲಿ ಹಾಲಿಗೆ ತತ್ವಾರ

By Web DeskFirst Published Jul 17, 2018, 9:52 AM IST
Highlights

- ದರ ಹೆಚ್ಚಳಕ್ಕೆ ಆಗ್ರಹಿಸಿ ರಸ್ತೆಗೆ ಹಾಲು ಚೆಲ್ಲಿ ಉತ್ಪಾದಕರ ಹೋರಾಟ

-ಪ್ರತಿ ಲೀಟರ್’ಗೆ 5 ರೂ ಹೆಚ್ಚಳ ಮಾಡುವಂತೆ ಆಗ್ರಹ 

-ಮುಂಬೈ ಹಾಗೂ ಪುಣೆ ಸೇರಿದಂತೆ ಅನೇಕ ಪ್ರಮುಖ ನಗರಗಳಿಗೆ ಪೂರೈಕೆಯಾಗುವ ಹಾಲಿಗೆ ತಡೆ 

ಮುಂಬೈ (ಜು. 17): ಮಹಾರಾಷ್ಟ್ರದ ಹಾಲು ಉತ್ಪಾದಕರಿಂದ ಹಾಲು ಒಕ್ಕೂಟಗಳು ಖರೀದಿಸುವ ಪ್ರತಿ ಲೀಟರ್ ಹಾಲಿಗೆ 5 ರು. ಹೆಚ್ಚು ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ಹೋರಾಟ ಆರಂಭಿಸಿದ್ದು, ಮುಂಬೈ ಹಾಗೂ ಪುಣೆ ಸೇರಿದಂತೆ ಅನೇಕ ಪ್ರಮುಖ ನಗರಗಳಿಗೆ ಪೂರೈಕೆಯಾಗುವ ಹಾಲನ್ನು ತಡೆಹಿಡಿದಿದ್ದಾರೆ.

ಹೀಗಾಗಿ ರಾಜ್ಯದಲ್ಲಿ ಈಗ ಕ್ಷೀರ ತತ್ವಾರ ಆರಂಭವಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೋರಾಟಗಾರರಿಗೆ ಮಾತುಕತೆಗೆ ಆಹ್ವಾನಿಸಿದ್ದು, ಮುಕ್ತ ಸಮಾಲೋಚನೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ.

ಪುಣೆ, ನಾಶಿಕ್, ಅಹ್ಮದ್ ನಗರ, ಬುಲ್ಢಾನಾ, ಜಳಗಾಂವ್ ಸೇರಿದಂತೆ ಕೊಲ್ಹಾಪುರ ಲೋಕಸಭಾ ಕ್ಷೇತ್ರದ ಸದಸ್ಯ ರಾಜು ಶೆಟ್ಟಿ ನೇತೃತ್ವದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಕಾರ್ಯಕರ್ತರು ಹಾಲು ಪೂರೈಕೆ ವಾಹನಗಳನ್ನು ತಡೆದರು. ಒಂದೆರಡು ಕಡೆ ಹಾಲಿನ ಟ್ಯಾಂಕರ್‌ಗಳಿಗೆ ಬೆಂಕಿ ಕೂಡ ಹಚ್ಚಲಾಗಿದೆ.

ಮುಂಬೈ, ಪುಣೆಯ ಅನೇಕ ಕಡೆ ಹಾಲಿನ ವಾಹನದಲ್ಲಿನ ಪ್ಯಾಕೆಟ್‌ಗಳನ್ನು ಪ್ರತಿಭಟನಾನಿರತರು ರಸ್ತೆಗೆ ತೂರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದವು. ಪ್ರತಿಭಟನೆಯ ಕಾರಣ ನಿತ್ಯ ಮುಂಬೈನಲ್ಲಿ 55 ಲಕ್ಷ ಹಾಲಿನ ಪಾಕೀಟುಗಳನ್ನು ಮಾರುವ ಅಮುಲ್ ಕಂಪನಿಗೆ ಕೂಡ ಪೂರೈಕೆಗೆ ತೊಂದರೆಯಾಗಿದೆ.

ಈ ನಡುವೆ, ಪಕ್ಕದ ಗುಜರಾತ್ ಹಾಗೂ ಕರ್ನಾಟಕದಿಂದ ಹಾಲು ತರಿಸಿಕೊಳ್ಳಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ. ಆದರೆ ಗುಜರಾತಲ್ಲಿ ಹಾಲು ಸಾಗಣೆಗೆ ತಡೆ ಒಡ್ಡುತ್ತೇವೆ ಎಂದು ಅಲ್ಲಿನ ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಕ್ ಹೇಳಿದ್ದು, ಮಹಾರಾಷ್ಟ್ರ ರೈತರ ಹೋರಾಟಕ್ಕೆ ಬೆಂಬಲ ಪ್ರಕಟಿಸಿದ್ದಾರೆ. ಈ ನಡುವೆ, ಕರ್ನಾಟಕದ ಹಾಲು ಪೂರೈಕೆಗೆ ನಾವು ಅವಕಾಶ ನೀಡಲ್ಲ ಎಂದು ಶೆಟ್ಟಿ
ಹೇಳಿದ್ದಾರೆ. 

click me!