
ಹಾಸನ (ಫೆ.09): ಭಗವಾನ್ ಬಾಹುಬಲಿಸ್ವಾಮಿಯ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಬರುವ ಭಕ್ತರ ಊಟೋಪಚಾರದ ವ್ಯವಸ್ಥೆಗೆ ಜೈನಕಾಶಿ ಶ್ರವಣಬೆಳಗೊಳ ಸಜ್ಜಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಶಾಸಕ ಸಿ.ಎನ್ ಬಾಲಕೃಷ್ಣ ಅವರಿಗೆ ಊಟ ಬಡಿಸುವ ಮೂಲಕ ಈ ಬೃಹತ್ ದಾಸೋಹಕ್ಕೆ ಚಾಲನೆ ನೀಡಿದರು.
ಉತ್ತರ ಮತ್ತು ದಕ್ಷಿಣ ಭಾರತಗಳೆರಡೂ ಶೈಲಿಗಳಲ್ಲಿ ಅಡುಗೆಯನ್ನು ಸಿದ್ಧಗೊಳಿಸಲಾಗುತ್ತಿದ್ದು ಇದಕ್ಕಾಗಿ ಪ್ರತಿದಿನ 17 ಭೋಜನಾ ಶಾಲೆಗಳಲ್ಲಿ 1800 ಬಾಣಸಿಗರು, 500 ಸಹಾಯಕರು ಹಗಲು ಇರುಳೆನ್ನದೇ ಶ್ರಮಿಸುತ್ತಿದ್ದಾರೆ. ಬೆಳಿಗ್ಗೆ ದಕ್ಷಿಣ ಭಾರತ ಇಡ್ಲಿ, ವಡೆ, ಪೊಂಗಲ್, ಮಧ್ಯಾಹ್ನ ಅನ್ನ ಸಾಂಬಾರ್, ವೆಜಿಟಬಲ್ ಬಾತ್, ಮೊಸರನ್ನ ಜೊತೆಗೆ ಹೋಳಿಗೆ, ಮೈಸೂರು ಪಾಕ್, ಪಾಯಸ ಸಿಹಿ ನೀಡಲಾಗುತ್ತದೆ. ಬೆಳಗ್ಗೆ ಉತ್ತರ ಭಾರತದ ಪರೋಟ, ಪಾವ್ ಬಾಜಿ, ರೊಟ್ಟಿ, ಬಾಜಿ, ಚಪಾತಿ ಮತ್ತು ರಸಗುಲ್ಲ, ಲಡ್ಡು ನೀಡಲಾಗುತ್ತದೆ. ರಾತ್ರಿ ವೇಳೆಯೂ ಇದೇ ಊಟ ಸವಿಯುವ ವ್ಯವಸ್ಥೆ ಮಾಡಲಾಗಿದೆ.(ಪ್ರತಿದಿನ ಮೆನುವಿನಲ್ಲಿ ಬದಲಾವಣೆ ಇರುತ್ತದೆ.) ಇಲ್ಲಿನ ಪ್ರಾದೇಶಿಕ ರುಚಿಯಾದ ರಾಗಿ ಮುದ್ದೆ ಹಾಗೂ ಸೊಪ್ಪಿನ ಸಾರನ್ನು ಕೂಡ ಇಲ್ಲಿ ಉಣಬಡಿಸಲಾಗುತ್ತಿದೆ.
ಪ್ರತಿಯೊಂದು ಭೋಜನಾ ಶಾಲೆಯಲ್ಲಿ ಪ್ರತಿದಿನ 30 ರಿಂದ 40 ಸಾವಿರಕ್ಕೂ ಹೆಚ್ಚು ಮಂದಿ ಊಟ, ತಿಂಡಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಪ್ರತಿದಿನ 70 ರಿಂದ ಲಕ್ಷಕ್ಕೆ ಏರುವ ಸಾಧ್ಯತೆಗಳಿದೆ. 26 ರವರೆಗೆ ಸಾಂಗೋಪಸಾಂಗವಾಗಿ ನಡೆಯುತ್ತದೆ. ಈ ಅನ್ನ ದಾಸೋಹಕ್ಕೆ ತಗುಲುವ ಬಹುತೇಕ ವೆಚ್ಚವನ್ನು ಮಠವೇ ಭರಿಸುತ್ತಿದೆ. ಇದರೊಂದಿಗೆ ಕರ್ನಾಟಕದ ನಾನಾ ಕಡೆಗಳಿಂದ ಲಾರಿಗಟ್ಟಲೇ ಆಹಾರ ಪದಾರ್ಥಗಳನ್ನು ಭಕ್ತರು ನೀಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.