ಸಚಿವ ಡಿ.ಕೆ.ಶಿವಕುಮಾರ್ ಅವರ ಕನಕಪುರದ ಆಸ್ತಿ ಮಾರಾಟ ಮಾಡಲಿ. ಅದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಬಿಜೆಪಿ ನಾಯಕರ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ (ಜೂ.17): ಸಚಿವ ಡಿ.ಕೆ ಶಿವಕುಮಾರ್ ಅವರು ತಮ್ಮ ಕನಕಪುರದ ಆಸ್ತಿ ಮಾರಾಟ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ರೈತರ ಭೂಮಿ ಮಾರಲು ಅಧಿಕಾರ ಕೊಟ್ಟವರ್ಯಾರು ಎಂದು ಬಿಜೆಪಿ ಮುಖಂಡ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ನಾಯಕರ ಈಶ್ವರಪ್ಪ ಸರ್ಕಾರ ಜಿಂದಾಲ್ ಗೆ ಭೂಮಿ ನೀಡಿರುವ ಸಂಬಂಧ ಅಸಮಾಧಾನ ಹೊರಹಾಕಿದರು.
ರಾಜ್ಯ ಸರ್ಕಾರ ಭಂಡತನಕ್ಕೆ ಇಳಿದಿದೆ. ನೂರಾರು ಕೋಟಿ ರು. ಬೆಲೆ ಬಾಳುವ ಭೂಮಿಯನ್ನು ಸರ್ಕಾರ ಜಿಂದಾಲ್ ಸಂಸ್ಥೆಗೆ ಕೇವಲ 30 ಕೋಟಿ ರು.ಗೆ ಮಾರಾಟ ಮಾಡ ಹೊರಟಿದೆ. ಯಾರು ಅಡ್ಡ ಬರುತ್ತಾರೋ, ಬರಲಿ ನೋಡೋಣ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಅವರು ಬೇಕಾದರೆ, ಕನಕಪುರದ ಅವರ ಆಸ್ತಿ ಮಾರಾಟ ಮಾಡಿಕೊಳ್ಳಲಿ. ಅದಕ್ಕೆ ನಾನು ಅಡ್ಡಿಯಾಗಲ್ಲ ಎಂದರು.
ಜಿಂದಾಲ್ ಗೆ ಭೂಮಿ ನೀಡಿರುವ ಸಂಬಂಧ ಕಾಂಗ್ರೆಸ್ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಏಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಡಿ.ಕೆ.ಶಿವಕುಮಾರ್ ಸರ್ವಾಧಿಕಾರಿಯಂತೆ ಹೇಳಿಕೆ ಕೊಡುತ್ತಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಈ ಬಗ್ಗೆ ಮೌನ ಮುರಿಯಬೇಕು ಎಂದು ಈಶ್ವರಪ್ಪ ಹೇಳಿದರು.