ದಿಲೀಪ್'ಗೆ ಸಿಗಲಿಲ್ಲ ಜಾಮೀನು; ಅಪರಾಧ ಜಗತ್ತಿನಲ್ಲೇ ದಿಲೀಪ್'ರದ್ದು ಅತ್ಯಂತ ವಿರಳ ಕೃತ್ಯವೇ?

By Suvarna Web DeskFirst Published Jul 24, 2017, 1:03 PM IST
Highlights

ಕೇರಳದ ಡಿಜಿಪಿ ಮಂಜೇರಿ ಶ್ರೀಧರನ್ ನಾಯರ್ ಹೇಳುವ ಪ್ರಕಾರ, ರೇಪ್ ಮಾಡಲು ಕೊಟೇಶನ್(ಸುಪಾರಿ) ಕೊಟ್ಟಿದ್ದು ಅಪರಾಧದ ಇತಿಹಾಸದಲ್ಲೇ ಮೊದಲಾಗಿದೆ. ದಿಲೀಪ್ ಮೇಲಿನ ಆರೋಪ ಸಾಬೀತಾದಲ್ಲಿ ಇದೊಂದು ಕ್ರೈಮ್ ಹಿಸ್ಟರಿಯಲ್ಲಿ ಅಪರೂಪದ ಘಟನೆಯಾಗಲಿದೆ.

ಕೊಚ್ಚಿ(ಜುಲೈ 24): ಬಹುಭಾಷಾ ಚಿತ್ರನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಮಲಯಾಳಂ ಸೂಪರ್'ಸ್ಟಾರ್ ದಿಲೀಪ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ. ಕೆಳ ಹಂತದ ನ್ಯಾಯಾಲಯದಿಂದಲೂ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದ ಹಿನ್ನೆಲೆಯಲ್ಲಿ ನಟ ದಿಲೀಪ್'ಗೆ ಮತ್ತೊಮ್ಮೆ ಮುಖಭಂಗವಾಗಿದೆ. ಪ್ರಕರಣದಲ್ಲಿ ದಿಲೀಪ್ ಭಾಗಿಯಾಗಿರುವ ಬಗ್ಗೆ ಪ್ರಬಲ ಸಾಕ್ಷ್ಯಾಧಾರಗಳಿದ್ದು, ಅವರಿಂದ ಸಾಕ್ಷ್ಯನಾಶದ ಅಪಾಯವಿರುವದರಿಂದ ಅವರಿಗೆ ಜಾಮೀನು ನೀಡಬಾರದೆಂದು ಸರಕಾರೀ ವಕೀಲರು ಮಾಡಿದ ವಾದವನ್ನು ಹೈಕೋರ್ಟ್ ಪುರಸ್ಕರಿಸಿದೆ.

ದಿಲೀಪ್ ಪ್ರಕರಣ ಇತಿಹಾಸದಲ್ಲೇ ವಿರಳ?
ನಟಿಯನ್ನು ಅಪಹರಿಸಿ, ರೇಪ್ ಮಾಡಲು ಸುಪಾರಿ ಕೊಟ್ಟ ಆರೋಪ ನಟ ದಿಲೀಪ್ ಮೇಲಿದೆ. ಪಲ್ಸರ್ ಸುನೀ ಎಂಬ ವೃತ್ತಿಪರ ರೌಡಿ ಮತ್ತು ಹಂತಕನಿಗೆ ದಿಲೀಪ್ ಸುಪಾರಿ ಕೊಟ್ಟಿದ್ದರೆನ್ನಲಾಗಿದೆ. 10 ಸಾವಿರ ರೂ ಕ್ಯಾಷ್ ಕೂಡ ಮುಂಗಡವಾಗಿ ಕೊಟ್ಟಿರುವುದು ತಿಳಿದುಬಂದಿದೆ. ಅಷ್ಟೇ ಅಲ್ಲ, ಸುನೀ ಖಾತೆಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ 1 ಲಕ್ಷ ರೂ ಡಿಪಾಸಿಟ್ ಆಗಿರುವುದೂ ಬೆಳಕಿಗೆ ಬಂದಿದೆ.

ಕೇರಳದ ಡಿಜಿಪಿ ಮಂಜೇರಿ ಶ್ರೀಧರನ್ ನಾಯರ್ ಹೇಳುವ ಪ್ರಕಾರ, ರೇಪ್ ಮಾಡಲು ಕೊಟೇಶನ್(ಸುಪಾರಿ) ಕೊಟ್ಟಿದ್ದು ಅಪರಾಧದ ಇತಿಹಾಸದಲ್ಲೇ ಮೊದಲಾಗಿದೆ. ದಿಲೀಪ್ ಮೇಲಿನ ಆರೋಪ ಸಾಬೀತಾದಲ್ಲಿ ಇದೊಂದು ಕ್ರೈಮ್ ಹಿಸ್ಟರಿಯಲ್ಲಿ ಅಪರೂಪದ ಘಟನೆಯಾಗಲಿದೆ.

ಸುಮ್ಮನೆ ಜಗ್ಗಿ ಎಳೆಯಲಾಗುತ್ತಿದೆ:
ದಿಲೀಪ್ ಪರ ವಕೀಲರ ಪ್ರಕಾರ, ದಿಲೀಪ್ ವಿರುದ್ಧ ದೊಡ್ಡ ಪಿತೂರಿ ನಡೆಯುತ್ತಿದೆ. ಪಲ್ಸರ್ ಸುನೀ ಎಂಬ ಕುಖ್ಯಾತ ಅಪರಾಧಿ ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ದಿಲೀಪ್ ಅವರನ್ನು ಬಂಧಿಸಿದ್ದಾರೆ. ಹಲವು ಬಾರಿ ವಿಚಾರಣೆ ನಡೆಸಿದರೂ ದಿಲೀಪ್ ಅವರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ಅದರೂ ಪ್ರಕರಣವನ್ನು ಪೊಲೀಸರು ಸುಮ್ಮನೆ ಜಗ್ಗಿ ಎಳೆಯಲು ಯತ್ನಿಸುತ್ತಿದ್ದಾರೆ ಎಂಬುದು ವಕೀಲರ ವಾದ.

click me!