ಬಿಜೆಪಿಯಲ್ಲಿ ಗರಿಗೆದರಿದ ಸರ್ಕಾರ ರಚನೆ ಉತ್ಸಾಹ

By Web DeskFirst Published Jul 15, 2019, 9:24 AM IST
Highlights

ರಾಜ್ಯದ ಮೈತ್ರಿ ಪಾಳಯದಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಬಿಜೆಪಿ ಪಾಳಯದಲ್ಲಿ ಉತ್ಸಾಹ ಗರಿಗೆದರಿದೆ.

ಬೆಂಗಳೂರು [ಜು.15] :  ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲವೇ ಇಲ್ಲ ಎಂಬುದಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಕಟಿಸಿದ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ ಪಾಳೆಯದಲ್ಲಿ ಉತ್ಸಾಹ ಮತ್ತು ನಿರೀಕ್ಷೆ ಹೆಚ್ಚಿದೆ.

ಶನಿವಾರ ಮತ್ತು ಭಾನುವಾರ ಮಧ್ಯಾಹ್ನದವರೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸೇರಿದಂತೆ ಆಡಳಿತಾರೂಢ ಪಕ್ಷಗಳ ನಾಯಕರು ಅತೃಪ್ತ ಶಾಸಕರ ಮನವೊಲಿಸಲು ನಡೆಸಿದ ಪ್ರಯತ್ನಗಳನ್ನು ಗಮನಿಸಿ ಬಿಜೆಪಿ ಪಾಳೆಯದಲ್ಲಿ ಸಹಜವಾಗಿಯೇ ತುಸು ನಿರಾಸೆಯ ವಾತಾವರಣ ಕಂಡುಬಂದಿತ್ತು. ರೆಸಾರ್ಟ್‌ನಲ್ಲಿದ್ದ ಶಾಸಕರು ಬಾಹ್ಯವಾಗಿ ಅಲ್ಲದಿದ್ದರೂ ಆಂತರಿಕವಾಗಿ ಮಂಕಾಗಿದ್ದರು.

ಆದರೆ, ಸಂಜೆ ಮುಂಬೈಯಲ್ಲಿ ಅತೃಪ್ತ ಶಾಸಕರು ತುರ್ತು ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರಿಂದ ಯಲಹಂಕ ಬಳಿಯ ಎರಡು ರೆಸಾರ್ಟ್‌ಗಳಲ್ಲಿದ್ದ ಬಿಜೆಪಿ ಶಾಸಕರಲ್ಲಿ ಹರ್ಷದ ವಾತಾವರಣ ಕಂಡುಬಂತು. ಈ ಬಗ್ಗೆ ಶಾಸಕರು ಪರಸ್ಪರ ಮಾತನಾಡಿಕೊಂಡು ಶೀಘ್ರದಲ್ಲಿಯೇ ತಮ್ಮ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುವುದರ ಬಗ್ಗೆ ಸಮಾಲೋಚನೆ ನಡೆಸುವುದರಲ್ಲಿ ನಿರತರಾದರು.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೂ ನಗುಮೊಗದಿಂದಲೇ ರೆಸಾರ್ಟ್‌ಗೆ ಆಗಮಿಸಿ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಶಾಸಕರೊಂದಿಗೆ ನಗುನಗುತ್ತಲೇ ಮಾತನಾಡಿದರು. ಜೊತೆಗೆ ತಮ್ಮ ವನವಾಸ ಮುಗಿಯುವ ದಿನಗಳು ಸಮೀಪಿಸಿವೆ ಎಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟರು ಎನ್ನಲಾಗಿದೆ.

click me!