ಸರ್ಕಾರ ರಚನೆ ವೇಳೆ ನೀಡಿದ್ದ ಬೆಂಬಲವನ್ನು ಸರ್ಕಾರ ನಡೆಸುವಾಗ ನೀಡುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ, ರೈತರ ಸಾಲಮನ್ನಾ, ಹೊಸ ಬಜೆಟ್, ಅಭಿವೃದ್ದಿ ಯೋಜನೆಗಳ ಬಗ್ಗೆ ಎಚ್’ಡಿಕೆ ಮಾತುಗಳನ್ನು ಆಲಿಸಿದ ರಾಹುಲ್ ಗಾಂಧಿ, ಸರ್ಕಾರ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ನವದೆಹಲಿ[ಜೂ.18]: ಬಜೆಟ್ ಸೇರಿದಂತೆ ಕೆಲವೊಂದು ವಿಚಾರಗಳಿಗೆ ಸಿದ್ದರಾಮಯ್ಯ ಅನಗತ್ಯ ಅಡ್ಡಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎದುರು ಮುಖ್ಯಮಂತ್ರಿ ಎಚ್’ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರ ರಚನೆ ವೇಳೆ ನೀಡಿದ್ದ ಬೆಂಬಲವನ್ನು ಸರ್ಕಾರ ನಡೆಸುವಾಗ ನೀಡುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ, ರೈತರ ಸಾಲಮನ್ನಾ, ಹೊಸ ಬಜೆಟ್, ಅಭಿವೃದ್ದಿ ಯೋಜನೆಗಳ ಬಗ್ಗೆ ಎಚ್’ಡಿಕೆ ಮಾತುಗಳನ್ನು ಆಲಿಸಿದ ರಾಹುಲ್ ಗಾಂಧಿ, ಸರ್ಕಾರ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಹೊಸಬಜೆಟ್ ಮಂಡನೆ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂಬ ಅಭಯವನ್ನು ರಾಹುಲ್ ಗಾಂಧಿ ಎಚ್’ಡಿಕೆಗೆ ನೀಡಿದ್ದಾರೆ. ಬಜೆಟ್ ಮಂಡನೆ ಅಗತ್ಯವಿಲ್ಲ ಎಂಬ ಸಿದ್ದರಾಮಯ್ಯ ಅವರ ವಾದವನ್ನು ಕಾಂಗ್ರೆಸ್ ಹೈಕಮಾಂಡ್ ತಳ್ಳಿಹಾಕಿದೆ. ಸಿದ್ದರಾಮಯ್ಯ ಹೊರತುಪಡಿಸಿ ಕಾಂಗ್ರೆಸ್’ನ ಇತರ ನಾಯಕರಾದ ಡಿಸಿಎಂ ಡಾ. ಜಿ ಪರಮೇಶ್ವರ್, ಡಿ.ಕೆ ಶಿವಕುಮಾರ್ ಬಜೆಟ್ ಮಂಡಿಸಲು ಒಪ್ಪಿಗೆ ಸೂಚಿಸಿದ್ದರು. ಇದೀಗ ಹೈಕಮಾಂಡ್ ಕೂಡಾ ಸಮ್ಮತಿಯ ಮುದ್ರೆಯೊತ್ತಿರುವುದು ಕುಮಾರಸ್ವಾಮಿ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಇನ್ನು ಜುಲೈನ ಮೊದಲ ವಾರದಲ್ಲಿ ಎಚ್’ಡಿ ಕುಮಾರಸ್ವಾಮಿ ಪೂರ್ಣಪ್ರಮಾಣದ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.