ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನನು ಶುಕ್ರವಾರ ಭೇಟಿ ಮಾಡಲಿದ್ದಾರೆ. ಈ ವೇಳೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಡಿ.22ಕ್ಕೆ ನಡೆಯುವುದೋ ಅಥವಾ ಮುಂದೂಡಿಕೆ ಕಾಣುವುದೋ? ನಡೆಯಲಿರುವುದು ವಿಸ್ತರಣೆಯೋ ಅಥವಾ ಪುನರ್ ರಚನೆಯೋ? ಯಾರಿಗೆ ಸಂಪುಟ ಸೇರುವ ಅದೃಷ್ಟ, ಯಾರಿಗೆ ಸಿಗಬಹುದು ಕೊಕ್?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ನಾಯಕರ ತಂಡ ದೆಹಲಿಗೆ ತೆರಳಿದ್ದು, ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯ ನಂತರ ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ಮೂಡಿರುವ ಎಲ್ಲಾ ಗೊಂದಲಗಳು ಬಹುತೇಕ ಸ್ಪಷ್ಟವಾಗುವ ಸಾಧ್ಯತೆಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರು ಖಚಿತವಾಗಿ ನೀಡುತ್ತಿದ್ದ ಭರವಸೆಗಳು ಅಸಲಿಯೋ ಅಥವಾ ಅತೃಪ್ತರ ಮೂಗಿಗೆ ಹಚ್ಚಿದ ಬೆಣ್ಣೆಯೋ ಎಂಬುದು ಇತ್ಯರ್ಥವಾಗಲಿದೆ.
ರಾಹುಲ್ ಗಾಂಧಿ ಅವರ ಭೇಟಿಗಾಗಿ ಗುರುವಾರ ಸಂಜೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ.ಜೆ. ಜಾಜ್ರ್ ಅವರು ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು. ಈ ನಾಯಕರು ಗುರುವಾರ ತಡರಾತ್ರಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದು, ಅನಂತರ ಶುಕ್ರವಾರ ಬೆಳಗ್ಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.
ಅಜೆಂಡಾ ಏನು?:
‘ಪ್ರಾಥಮಿಕ ಹಂತದ ಚರ್ಚೆಯ ವೇಳೆ ಅಸಲಿಗೆ ಈಗ ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ವಿಶದವಾಗಿ ಚರ್ಚೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ಮಾಡಿದರೆ ಅದರಿಂದ ಉದ್ಭವವಾಗುವ ಭಿನ್ನಮತ ಯಾವ ರೀತಿ ಪಕ್ಷ ಹಾಗೂ ಸರ್ಕಾರದ ಮೇಲೆ ಪರಿಣಾಮ ಬೀರಬಹುದು ಮತ್ತು ವಿಸ್ತರಣೆ ಮಾಡದಿದ್ದರೆ ಅದರಿಂದಾಗುವ ಪರಿಣಾಮಗಳೇನಾಗಬಹುದು ಎಂಬುದು ಚರ್ಚೆಗೆ ಬರಬಹುದು. ಇದೇ ವೇಳೆ ಸಂಪುಟ ಪುನರ್ ರಚನೆ ಮಾಡುವುದರಿಂದ ಆಗಬಹುದಾದ ಪರಿಣಾಮ ಕುರಿತು ಸಮಾಲೋಚನೆಯನ್ನು ನಾಯಕರು ನಡೆಸಬಹುದು’ ಎನ್ನಲಾಗಿದೆ.
ರಾಜ್ಯ ಸಚಿವ ಸಂಪುಟ ಡಿ. 22ರಂದು ನಡೆಯಲಿದೆ ಎಂದು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರು ಖಚಿತವಾಗಿ ಹೇಳುತ್ತಿದ್ದರೂ ಈ ಕುರಿತು ಹಲವು ಗೊಂದಲಗಳಿವೆ. ಸಂಪುಟ ವಿಸ್ತರಣೆ ಡಿ. 22ಕ್ಕೆ ನಡೆಯುವುದೇ ಅಥವಾ ಒಂದೆರಡು ದಿನ ತಡವಾಗಿ ನಡೆಯುವುದೋ ಎಂಬ ಪ್ರಶ್ನೆಯಿದೆ. ಜತೆಗೆ, ನಡೆಯಲಿರುವುದು ಸಂಪುಟ ವಿಸ್ತರಣೆಯೋ ಅಥವಾ ಪುನರಚನೆಯೋ ಎಂಬ ಗೊಂದಲವೂ ಇದೆ. ಇದೆಲ್ಲಕ್ಕೂ ಮಿಗಿಲಾಗಿ ಸಂಪುಟ ವಿಸ್ತರಣೆ ಎಂಬುದು ಶಾಸಕಾಂಗ ಪಕ್ಷದ ಸಭೆ ಹಾಗೂ ಅಧಿವೇಶನವನ್ನು ಸಾಂಗೋಪಾಂಗವಾಗಿ ನಡೆಸಲು ಈ ತಂತ್ರ ಹೂಡಿದರೇ ಎಂಬ ಅನುಮಾನಗಳು ಕಾಂಗ್ರೆಸ್ ವಲಯದಲ್ಲಿದೆ.
ಯಾರು ಇನ್, ಔಟ್?:
ಒಂದು ವೇಳೆ ಪುನರ್ ರಚನೆಗೆ ಮನಸ್ಸು ಮಾಡಿದರೆ, ಸಚಿವರಾದ ಶಂಕರ್, ವೆಂಕಟರಮಣ್ಣಪ್ಪ, ಜಯಮಾಲಾ ಅವರಿಗೆ ಕೊಕ್ ದೊರೆಯುವ ಸಾಧ್ಯತೆಯಿದೆ. ಇದಲ್ಲದೆ, ಪ್ರಭಾವಿ ಸಚಿವರಾದ ಆರ್.ವಿ. ದೇಶಪಾಂಡೆ, ಕೃಷ್ಣ ಬೈರೇಗೌಡ ಅವರಂತಹ ನಾಯಕರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹೈಕಮಾಂಡ್ ಹೇಳಿದರೆ ಆಗ ಅವರು ಸಚಿವ ಸ್ಥಾನ ತೊರೆದು ಪಕ್ಷದಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಪದೇ ಪದೇ ಬಿಜೆಪಿಯವರೊಂದಿಗೆ ಗುರುತಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಒಳಗಾಗಿಸುತ್ತಿರುವ ರಮೇಶ್ ಜಾರಕಿಹೊಳಿ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ನಾಯಕರು ಹೈಕಮಾಂಡ್ನಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ರಮೇಶ್ ಅವರನ್ನು ಕೈ ಬಿಟ್ಟು ಅವರ ಸಹೋದರ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಚಿಂತನೆಯೂ ಇದೆ. ಆದರೆ, ಇದು ರಮೇಶ್ ಅವರನ್ನು ಕೈ ಬಿಡುವುದರಿಂದ ಪಕ್ಷ ಹಾಗೂ ಸರ್ಕಾರದ ಮೇಲೆ ಆಗುವ ಪರಿಣಾಮಗಳನ್ನು ಅವಲೋಕಿಸಬೇಕಾದ ಅಗತ್ಯವಿದೆ. ಏಕೆಂದರೆ, ರಮೇಶ್ ಅವರೊಂದಿಗೆ ನಾಲ್ಕಾರು ಮಂದಿ ಶಾಸಕರು ಗುರುತಿಸಿಕೊಂಡಿದ್ದು, ಇಂತಹ ಬೆಳವಣಿಗೆ ನಡೆದರೇ ಅವರು ಯಾವ ನಿರ್ಧಾರ ಕೈಗೊಳ್ಳಬಹುದು ಎಂಬ ಆತಂಕವೂ ಇದೆ.
ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಶಾಸಕರು
ಲಿಂಗಾಯತ: ಎಂ.ಬಿ. ಪಾಟೀಲ್, ಬಿ.ಸಿ. ಪಾಟೀಲ್, ಬಿ.ಕೆ. ಸಂಗಮೇಶ್ ಮತ್ತು ಶಾಮನೂರು ಶಿವಶಂಕರಪ್ಪ, ಲಕ್ಷ್ಮೇ ಹೆಬ್ಬಾಳಕರ್
ಅಲ್ಪಸಂಖ್ಯಾತ: ರಹೀಂ ಖಾನ್, ತನ್ವೀರ್ಸೇಠ್ ಮತ್ತು ರೋಷನ್ ಬೇಗ್
ಕುರುಬ: ಸಿ.ಎಸ್. ಶಿವಳ್ಳಿ, ಎಂ.ಟಿ.ಬಿ. ನಾಗರಾಜ್
ನಾಯಕ: ಇ. ತುಕಾರಾಂ, ಸತೀಶ್ ಜಾರಕಿಹೊಳಿ, ನಾಗೇಂದ್ರ, ರಘುಮೂರ್ತಿ
ಪರಿಶಿಷ್ಟಎಡಗೈ: ಆರ್.ಬಿ. ತಿಮ್ಮಾಪುರ, ರೂಪಾ ಶಶಿಧರ್
ಒಕ್ಕಲಿಗ: ಡಾ. ಸುಧಾಕರ್, ಎಸ್.ಟಿ. ಸೋಮಶೇಖರ್, ಎಂ. ಕೃಷ್ಣಪ್ಪ
ರೆಡ್ಡಿ: ರಾಮಲಿಂಗಾರೆಡ್ಡಿ
ಒಬಿಸಿ: ಅಂಜಲಿ ನಿಂಬಾಳ್ಕರ್
ಸ್ಥಾನ ನಷ್ಟಸಾಧ್ಯತೆ
ಆರ್. ಶಂಕರ್, ಅರಣ್ಯ
ವೆಂಕಟರಮಣಪ್ಪ, ಕಾರ್ಮಿಕ
ಜಯಮಾಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ರಮೇಶ್ ಜಾರಕಿಹೊಳಿ, ಪೌರಾಡಳಿತ
ಲೋಕಸಭೆಗೆ ಸ್ಪರ್ಧಿಸಿದರೆ ಇವರ ಸ್ಥಾನ ನಷ್ಟ
ಆರ್.ವಿ. ದೇಶಪಾಂಡೆ, ಕಂದಾಯ
ಕೃಷ್ಣ ಬೈರೇಗೌಡ, ಆರ್ಡಿಪಿಆರ್