ಅಂತೂ-ಇಂತೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ಕೂಡಿ ಬಂದಿದೆಯೇ? ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಆಕಾಂಕ್ಷಿಗಳಿಗೆ ಈ ಬಾರಿ ಹಬ್ಬ ಮುಗಿದ ಮೇಲೆಯೇ ಶುಭ ಸುದ್ದಿ ಸಿಗುವುದು ಬಹುತೇಕ ಖಚಿತವಾಗಿದೆ.
ಬೆಂಗಳೂರು[ನ.14] ಸಂಪುಟ ವಿಸ್ತರಣೆಗೆ ಸಿಗುತ್ತಾ ಚಾಲನೆ ಎಂಬ ಪ್ರಶ್ನೆ ಮೂಡಿದೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆಗೆ ದೆಹಲಿಗೆ ಡಿಸಿಎಂ ಪರಮೇಶ್ವರ ಇಂದು[ಬುಧವಾರ] ಸಂಜೆ ತೆರಳಲಿದ್ದಾರೆ. ಜತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ತೆರಳಲಿದ್ದಾರೆ.
ಗುರುವಾರ ಬೆಳಗ್ಗೆ ಹೈಕಮಾಂಡ್ ಜೊತೆ ಗುಂಡುರಾವ್ ಮತ್ತು ಪರಮೇಶ್ವರ್ ಚರ್ಚೆ ನಡೆಸಲಿದ್ದಾರೆ. 22 ರ ಒಳಗೆ ಸಂಪುಟ ವಿಸ್ತರಣೆ ಮಾಡಿ ಎಂದು ದೇವೇಗೌಡರು ನೀಡಿದ್ದ ಸೂಚನೆ ನಂತರ ಕಾಂಗ್ರೆಸ್ ಚುರುಕಾಗಿದೆ.
ಮಂತ್ರಿಗಿರಿಗೆ ಮಾಜಿ ಸಿಎಂ ಅಭಯ ಪಡೆದ ಉಕ ಶಾಸಕರು ಯಾರು?
ಇನ್ನೊಂದು ಕಡೆ ದುಬೈ ಪ್ರವಾಸದಿಂದ ರಾಜ್ಯಕ್ಕೆ ದೇವೇಗೌಡರು ವಾಪಸ್ ಆಗುತ್ತಿದ್ದಾರೆ. ಗೌಡರು ಬರುವುದರೊಳಗಾಗಿ ಪಟ್ಟಿ ಫೈನಲ್ ಮಾಡಿಕೊಳ್ಳಬೇಕು ಎಂಬುದು ಕಾಂಗ್ರೆಸ್ ಚಿಂತನೆಯಾಗಿದೆ.
ಯಾರಿಗೆ ಸಿಗಬಹುದು ಸಚಿವ ಸ್ಥಾನ: ಜೆಡಿಎಸ್ ನಿಂದ ಶಿಕ್ಷಣ ಸಚಿವರಾಗಿ ಅನುಭವಿ ಬಸವರಾಜ್ ಹೊರಟ್ಟಿ ನೇಮಕವಾಗುವುದು ಖಚಿತ. ಆದರೆ ಕಾಂಗ್ರೆಸ್ ನಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್ , ರಾಮಲಿಂಗಾರೆಡ್ಡಿ, ಬಿ.ಸಿ.ಪಾಟೀಲ್, ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್, ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ, ಸತೀಶ್ ಜಾರಕಿಹೊಳಿ, ಆನಂದ್ ಸಿಂಗ್, ಲಕ್ಷ್ಮೀ ಹೆಬ್ಬಾಳ್ಕರ್ ಸಹ ಸಚಿವ ಸ್ಥಾನದ ರೇಸ್ ನಲ್ಲಿ ಇದ್ದಾರೆ. ಒಬ್ಬೊಬ್ಬರಿಗೆ ಒಬ್ಬೊಬ್ಬ ನಾಯಕರ ಕೃಪಾ ಕಟಾಕ್ಷ ಇದೆ. ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆಯೋ ಕಾದು ನೋಡಬೇಕು.