ಕಡೆಗೂ ಕರ್ನಾಟಕ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿಬಂದಿದೆ. ಈ ವೇಳೆ ಕಾಂಗ್ರೆಸ್ 8 ಮಂದಿ ಶಾಸಕರಿಗೆ ಮಂತ್ರಿಭಾಗ್ಯ ದೊರೆಯುವ ಸಾಧ್ಯತೆ ಇದೆ.
ಬೆಂಗಳೂರು : ಕಡೆಗೂ ರಾಜ್ಯ ನಾಯಕರು ಭರವಸೆ ನೀಡಿದ್ದಂತೆಯೇ ಶನಿವಾರ (ಡಿ.22) ಸಚಿವ ಸಂಪುಟ ಪುನರ್ ರಚನೆ ನಡೆಯಲಿದೆ. ಇಬ್ಬರು ಹಾಲಿ ಸಚಿವರಿಗೆ ಕೊಕ್ ನೀಡಿ, ಎಂಟು ಮಂದಿ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಹೈಕಮಾಂಡ್ ಒಪ್ಪಿಗೆ ಪಡೆಯುವಲ್ಲಿ ರಾಜ್ಯ ನಾಯಕರು ಯಶಸ್ವಿಯಾಗಿದ್ದಾರೆ.
ಸಂಪುಟ ಪುನಾರಚನೆಯಲ್ಲಿ ಬಿಜೆಪಿ ಸಖ್ಯದ ಬಹಿರಂಗ ಪ್ರದರ್ಶನ ನೀಡಿದ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಪಕ್ಷೇತರರಾದ ಅರಣ್ಯ ಸಚಿವ ಶಂಕರ್ ಹುದ್ದೆ ಕಳೆದುಕೊಳ್ಳಲಿದ್ದಾರೆ. ಉನ್ನತ ಮೂಲಗಳಿಂದ ದೊರಕಿರುವ ಮಾಹಿತಿ ಪ್ರಕಾರ ಶಾಸಕರಾದ ಸತೀಶ್ ಜಾರಕಿಹೊಳಿ, ತುಕಾರಾಂ, ರಹೀಂ ಖಾನ್, ಸಿ.ಎಸ್. ಶಿವಳ್ಳಿ, ಎಂ.ಟಿ.ಬಿ. ನಾಗರಾಜ್, ಆರ್.ಬಿ. ತಿಮ್ಮಾಪುರ ಹಾಗೂ ಪಿ.ಟಿ. ಪರಮೇಶ್ವರ್ ನಾಯ್ಕ ಸಂಪುಟ ಸೇರುವುದು ನಿಕ್ಕಿ.
ಆದರೆ, ಲಿಂಗಾಯತ ಕೋಟಾದಿಂದ ಎಂ.ಬಿ. ಪಾಟೀಲ್ ಹಾಗೂ ಬಿ.ಸಿ. ಪಾಟೀಲ್ ಪೈಕಿ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ತೀವ್ರ ಗೊಂದಲವಿದೆ. ಹೈಕಮಾಂಡ್ ಎಂ.ಬಿ. ಪಾಟೀಲ್ ಬಗ್ಗೆ ಒಲವು ಹೊಂದಿದ್ದರೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿ.ಸಿ. ಪಾಟೀಲ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಪಟ್ಟು ಹಿಡಿದಿದ್ದಾರೆ. ಈ ವಿಚಾರ ಇನ್ನೂ ಬಗೆಹರಿದಿಲ್ಲ. ಬಹುತೇಕ ಶನಿವಾರ ಮಧ್ಯಾಹ್ನದ ವೇಳೆಗೆ ಈ ಇಬ್ಬರ ಪೈಕಿ ಒಬ್ಬರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ. ಉನ್ನತ ಮೂಲಗಳ ಪ್ರಕಾರ ಎಂ.ಬಿ. ಪಾಟೀಲ್ ಅವರೇ ಸಂಪುಟ ಸೇರುವ ಸಾಧ್ಯತೆ ಹೆಚ್ಚಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂಬ ಟೀಕೆಯಿರುವುದರಿಂದ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ 8 ಸಚಿವ ಸ್ಥಾನಗಳ ಪೈಕಿ 7 ಸ್ಥಾನ ಉತ್ತರ ಕರ್ನಾಟಕಕ್ಕೇ ಲಭಿಸಲಿದೆ ಎಂಬುದು ವಿಶೇಷ.
ಇದೇ ವೇಳೆ ಕಾಂಗ್ರೆಸ್ ಪಾಲಿಗೆ ಬರುವ 20 ನಿಗಮ ಮಂಡಳಿ, ಒಂದು ರಾಜಕೀಯ ಕಾರ್ಯದರ್ಶಿ ಹಾಗೂ ಎಂಟು ಸಂಸದೀಯ ಕಾರ್ಯದರ್ಶಿಗಳ ನೇಮಕಾತಿ ಪಟ್ಟಿಗೂ ಹೈಕಮಾಂಡ್ ಒಪ್ಪಿಗೆ ನೀಡಿದೆ. ಜತೆಗೆ, ಶಾಸಕ ಅಜಯ್ ಸಿಂಗ್ ಅವರನ್ನು ದೆಹಲಿ ವಿಶೇಷ ಪ್ರತಿನಿಧಿಯನ್ನಾಗಿ ನೇಮಕ ಮಾಡಲು ಹಾಗೂ ವಿ. ಮುನಿಯಪ್ಪ ಅವರನ್ನು ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲು ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಪ್ರಸ್ತುತ ಎಂಟು ಸಚಿವ ಸ್ಥಾನಗಳು ಖಾಲಿ ಉಳಿದಿದ್ದು, ಈ ಪೈಕಿ ಕಾಂಗ್ರೆಸ್ ಪಾಲು ಆರು ಸ್ಥಾನಗಳು. ಸಂಪುಟದಿಂದ ಇಬ್ಬರು ಸಚಿವರಿಗೆ ಕೊಕ್ ನೀಡಲು ನಿರ್ಧಾರ ಕೈಗೊಂಡಿರುವುದರಿಂದ ಒಟ್ಟು ಎಂಟು ಸ್ಥಾನಗಳನ್ನು ತುಂಬಲು ಕಾಂಗ್ರೆಸ್ ಅವಕಾಶ ಮಾಡಿಕೊಂಡಿದ್ದು, ಎಲ್ಲಾ ಎಂಟು ಸ್ಥಾನಗಳನ್ನು ತುಂಬಲು ತೀರ್ಮಾನಿಸಿದೆ.
ಆದರೆ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹಾಲಿ ಹೊಂದಿರುವ ಮೂರು ಖಾತೆಗಳ ಪೈಕಿ ಯುವಜನ ಹಾಗೂ ಕ್ರೀಡೆ ಖಾತೆಯನ್ನು ಹಿಂಪಡೆಯಲು ಮಾತ್ರ ನಿರ್ಧಾರವಾಗಿದ್ದು, ಉಳಿದ ಎರಡು ಖಾತೆಗಳಾದ ಬೆಂಗಳೂರು ನಗರಾಭಿವೃದ್ಧಿ ಹಾಗೂ ಗೃಹ ಖಾತೆಯನ್ನು ಅವರಿಗೇ ಉಳಿಸಲು ತೀರ್ಮಾನಿಸಲಾಗಿದೆ. ಉಳಿದಂತೆ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವ ಇತರ ಶಾಸಕರಿಂದ ಹೆಚ್ಚುವರಿ ಖಾತೆಗಳನ್ನು ಪಡೆದುಕೊಂಡು ಹೊಸದಾಗಿ ಸಚಿವರಾದವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ಸಖ್ಯ ರಮೇಶ್ಗೆ ದುಬಾರಿ:
ಬಿಜೆಪಿ ಜತೆಗಿನ ಸಖ್ಯವನ್ನು ಬಹಿರಂಗವಾಗಿ ಪ್ರದರ್ಶಿಸಿದ ನಾಯಕ ಸಮುದಾಯದ ರಮೇಶ್ ಜಾರಕಿಹೊಳಿ ಅವರಿಗೆ ಹೈಕಮಾಂಡ್ ಶಿಕ್ಷೆ ನೀಡಿದ್ದು, ಸಂಪುಟದಿಂದ ಕೊಕ್ ನೀಡಲಾಗಿದೆ. ಅವರಿಂದ ತೆರವಾದ ಸ್ಥಾನವನ್ನು ಅವರ ಸಹೋದರ ಸತೀಶ್ ಜಾರಕಿಹೊಳಿ ಅವರಿಗೆ ನೀಡಲಾಗಿದೆ. ಇದಲ್ಲದೆ, ನಾಯಕ ಸಮುದಾಯದವರೇ ಆದ ಬಳ್ಳಾರಿ ಜಿಲ್ಲೆಯ ತುಕಾರಾಂ ಅವರಿಗೆ ಸಂಪುಟದಲ್ಲಿ ಅವಕಾಶ ನೀಡುವ ಮೂಲಕ ಆ ಸಮುದಾಯಕ್ಕೆ ಎರಡು ಸ್ಥಾನಗಳನ್ನು ನೀಡಿದಂತಾಗಿದೆ.
ಇದೇ ರೀತಿ ಈ ಬಾರಿ ಸಂಪುಟದಲ್ಲಿ ಎರಡು ಸ್ಥಾನ ಗಿಟ್ಟಿಸಿರುವುದು ಕುರುಬ ಸಮುದಾಯ. ಕುರುಬ ಸಮುದಾಯದಿಂದ ಈ ಬಾರಿ ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಕಾರಣಕ್ಕೆ ಸಿ.ಎಸ್. ಶಿವಳ್ಳಿ ಅವರ ಹೆಸರು ಚಾಲ್ತಿಯಲ್ಲಿತ್ತು. ಆದರೆ, ಎಂ.ಟಿ.ಬಿ. ನಾಗರಾಜ್ ಸಚಿವ ಸ್ಥಾನಕ್ಕಾಗಿ ಪಟ್ಟುಹಿಡಿದ ಕಾರಣ ಶಂಕರ್ಗೆ ಕೊಕ್ ನೀಡುವ ಮೂಲಕ ಇಬ್ಬರಿಗೂ ಅವಕಾಶ ಮಾಡಿಕೊಡಲಾಗಿದೆ.
ಇದುವರೆಗೂ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ಪಡೆಯದೇ ಇದ್ದ ಬಳ್ಳಾರಿ ಜಿಲ್ಲೆಯು ಈ ಬಾರಿ ಎರಡು ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ. ಲಂಬಾಣಿ ಸಮುದಾಯದ ಪಿ.ಟಿ. ಪರಮೇಶ್ವರ್ ನಾಯ್್ಕ ಹಾಗೂ ನಾಯಕ ಸಮುದಾಯದ ತುಕಾರಾಂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಬಾದಾಮಿಯಲ್ಲಿ ತಮ್ಮ ಗೆಲುವಿಗಾಗಿ ಶ್ರಮಿಸಿದ ಆರ್.ಬಿ. ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ದೊರಕಿಸಿಕೊಡುವಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಪರಿಶಿಷ್ಟಎಡಗೈ ಪಂಗಡದಿಂದ ತಮ್ಮ ಪುತ್ರಿ ರೂಪಾ ಶಶಿಧರ್ಗೆ ಅವಕಾಶ ನೀಡುವಂತೆ ಸಂಸದ ಕೆ.ಎಚ್. ಮುನಿಯಪ್ಪ ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿ ಆರ್.ಬಿ. ತಿಮ್ಮಾಪುರ ಅವರಿಗೆ ಸ್ಥಾನ ಗಿಟ್ಟಿಸಿಕೊಟ್ಟಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ರಹೀಂ ಖಾನ್ ಅವರಿಗೆ ಅವಕಾಶ ನೀಡುವ ಮೂಲಕ ಉತ್ತರ ಕರ್ನಾಟಕ ಭಾಗದ ಮುಸ್ಲಿಮರಿಗೆ ಅವಕಾಶವನ್ನು ನೀಡಿದಂತಾಗಿದೆ.
ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ನೀಡಲಾಗಿಲ್ಲ ಎಂಬ ಕೂಗು ಹೈಕಮಾಂಡ್ಗೆ ಬಲವಾಗಿಯೇ ತಟ್ಟಿದ್ದು, ಸಂಪುಟ ಸೇರಿದ ಎಂಟು ಮಂದಿಯ ಪೈಕಿ ಏಳು ಮಂದಿ ಉತ್ತರ ಕರ್ನಾಟಕದ ಶಾಸಕರೇ ಆಗಿದ್ದಾರೆ.