
ಬೆಂಗಳೂರು(ಅ. 31): ಗ್ಯಾಂಗ್ರೀನ್'ನಿಂದ ಒಂದು ಕಾಲು ಕಳೆದುಕೊಂಡಿರುವ ಕನ್ನಡದ ಹಿರಿಯ ನಟ ಸತ್ಯಜಿತ್ ಅಕಾ ಸಯದ್ ನಿಜಾಮುದ್ದೀನ್ ಅವರು ಉದಾರ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸುವರ್ಣನ್ಯೂಸ್ ಸ್ಟುಡಿಯೋಗೆ ಆಗಮಿಸಿ ಮಾತನಾಡಿದ ಸತ್ಯಜಿತ್ ತಮ್ಮ ಅಂತರಾಳವನ್ನು ಬಿಚ್ಚಿಟ್ಟಿದ್ದಾರೆ. ನಟನೆ ಹೊರತು ಬೇರೆ ವೃತ್ತಿ ಗೊತ್ತಿಲ್ಲದ ತಾನು ಮತ್ತೆ ಸಿನಿಮಾರಂಗದಲ್ಲೇ ಬೆವರು ಹರಿಸಿ ದುಡಿಯಬೇಕೆನ್ನುವ ತುಡಿತ ಅವರದ್ದು. ಒಳ್ಳೆಯ ಗುಣಮಟ್ಟದ ಕೃತಕ ಕಾಲಿನ ಅಳವಡಿಕೆಗೆ ಸಾಕಷ್ಟು ವೆಚ್ಚವಾಗುವುದು ಅವರಿಗೆ ಕಷ್ಟಕರವೆನಿಸಿದೆ. ಈ ಹಿನ್ನೆಲೆಯಲ್ಲಿ ಅವರು ಜನರಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ನೆರವು ನೀಡಬಯಸುವವರು ಈ ಕೆಳಕಾಣಿಸಿದ ಬ್ಯಾಂಕ್ ಖಾತೆಗೆ ಹಣ ಡೆಪಾಸಿಟ್ ಮಾಡಬಹುದಾಗಿದೆ.
Name: Nizamuddin Sayed
IFSC code: SBI0011354
SBI A/c no.: 31984795814
ಚಿತ್ರೋದ್ಯಮದಿಂದ ಒಂದಷ್ಟು ನೆರವು:
ಕನ್ನಡ ಚಿತ್ರ ಕಲಾವಿದರ ಸಂಘದ ಪ್ರತೀ ಸದಸ್ಯರಿಗೆ 3 ಲಕ್ಷ ಮೆಡಿಕ್ಲೈಮ್ ಇನ್ಷೂರೆನ್ಸ್ ಲಭ್ಯವಿದೆ. ಇದು ಸತ್ಯಜಿತ್'ಗೆ ಸಾಕಷ್ಟು ನೆರವಿಗೆ ಬಂದಿದೆ. ಶಿವ ರಾಜ್'ಕುಮಾರ್, ಪುನೀತ್ ರಾಜಕುಮಾರ್ ಮತ್ತು ಉಪೇಂದ್ರ ಅವರು ತಲಾ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ. ಸುದೀಪ್ ಅಭಿಮಾನಿಗಳ ಸಂಘ ಕೂಡ ನೆರವಿಗೆ ಮುಂದೆ ಬಂದಿದ್ದು 50 ಸಾವಿರ ರೂ ನೀಡುವುದಾಗಿ ಹೇಳಿದೆ. ನಿರ್ಮಾಪಕರಾದ ರಾಕ್'ಲೈನ್ ವೆಂಕಟೇಶ್ ಮತ್ತು ರೆಹಮಾನ್ ಅವರು ಸುವರ್ಣನ್ಯೂಸ್ ಜೊತೆ ಮಾತನಾಡಿ ಸತ್ಯಜಿತ್'ಗೆ ಅಗತ್ಯ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ, ರೋಟರಿ ಸಂಸ್ಥೆಯು ತಾನು ಕೃತಕ ಕಾಲು ಜೋಡಣೆ ಮಾಡುವುದಾಗಿ ಭರವಸೆ ನೀಡಿದೆ.
ಸತ್ಯಜಿತ್ ಕುಟುಂಬದ ಕುರಿತು:
ಸತ್ಯಜಿತ್ ಅವರ ಮೂಲ ಹೆಸರು ಸಯದ್ ನಿಜಾಮುದ್ದೀನ್. ಚಿತ್ರರಂಗಕ್ಕೆ ಬಂದ ಬಳಿಕ ಸತ್ಯಜಿತ್ ಆದರು. ಚಿತ್ರರಂಗಕ್ಕೆ ಬರುವ ಮುನ್ನ ಕೆಎಸ್ಸಾರ್ಟಿಸಿ ಚಾಲಕರಾಗಿದ್ದ ಸತ್ಯಜಿತ್ ಅವರು ಯೂನಿವರ್ಸಿಟಿ ರಿಜಿಸ್ಟ್ರಾರ್ ಪುತ್ರಿ ಶೈಲಜಾ ಅವರನ್ನು ಪ್ರೇಮಿಸಿ ವಿವಾಹವಾದರು. ಮದುವೆ ಬಳಿಕ ಶೈಲಜಾ ಅವರು ಮತಾಂತರಗೊಂಡು ಸೋಫಿಯಾ ಬೇಗಂ ಆದರು. ಸತ್ಯಜಿತ್'ಗೆ ಮೂರು ಮಕ್ಕಳಿದ್ದು ಹಿರಿಯ ಮಗ ಆಕಾಶ್'ಜಿತ್ ಕನ್ನಡದಲ್ಲಿ "ತಬ್ಬಲಿ", "ಶಂಭೋ ಮಹದೇವ" ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಎರಡನೇ ಮಗಳು ಕಮರ್ಷಿಯಲ್ ಪೈಲಟ್ ಟ್ರೈನಿಂಗ್ ಪಡೆದು ಕೆಲಸ ಹುಡುಕುತ್ತಿದ್ದಾಳೆ ಎಂದು ಸತ್ಯಜಿತ್ ಅವರು ಸುವರ್ಣನ್ಯೂಸ್ ವಾಹಿನಿಯಲ್ಲಿ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.