
ಬೆಂಗಳೂರು : ಛಲವಾದಿಪಾಳ್ಯ ವಾರ್ಡ್ನ ಬಿಜೆಪಿ ಬಿಬಿ ಎಂಪಿ ಸದಸ್ಯೆ ರೇಖಾ ಅವರ ಪತಿ ಕದಿರೇಶ್ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ಇಬ್ಬರು ತಲೆ ಬೋಳಿಸಿಕೊಂಡು ವಕೀಲರ ವೇಷದಲ್ಲಿ ನ್ಯಾಯಾ ಲಯಕ್ಕೆ ಬಂದು ಶರಣಾಗಿದ್ದಾರೆ. ಪ್ರಮುಖ ಆರೋಪಿಗಳಾದ ನವೀನ್ ಮತ್ತು ಈತನ ಸಹೋದರ ವಿನಯ್ ನ್ಯಾಯಾಲಯದ ಎದುರು ಶರಣಾದವರು.
ಫೆ.7ರಂದು ಕದಿರೇಶ್ ಆಂಜನಪ್ಪ ಗಾರ್ಡನ್ 3ನೇ ಅಡ್ಡರಸ್ತೆ ನ್ಯೂ ಲೇಔಟ್ನಲ್ಲಿ ಮುನೇಶ್ವರ ದೇವಾಲಯದ ಬಳಿ ಇದ್ದಾಗ ನಾಲ್ಕು ಮಂದಿಯ ಹಂತಕರ ಪಡೆ ಅವರ ಮೇಲೆ ಎರಗಿ ಹತ್ಯೆಗೈದು ಪರಾರಿಯಾಗಿತ್ತು. ಹಂತಕರ ಪತ್ತೆಗೆ ಪಶ್ಚಿಮ ವಿಭಾಗದ ಡಿಸಿಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಪೊಲೀಸರ ತಂಡ ತಮಿಳುನಾಡು, ಆಂಧ್ರಪ್ರದೇಶ ಮತ್ತು ಇನ್ನಿತರ ಕಡೆ ತೆರಳಿ ತಲೆ ಮರೆಸಿಕೊಂಡಿದ್ದರು. ಪೊಲೀಸರು ಗುಂಡು ಹಾರಿಸಿ ಬಂಧಿಸುತ್ತಾರೆ ಎಂದು ಬೆದರಿದ್ದ ಇಬ್ಬರು ಆರೋಪಿಗಳು ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ವಕೀಲರೊಂದಿಗೆ ಕೋರ್ಟ್ನ ಆವರಣ ಪ್ರವೇಶಿಸಿದ್ದರು.
ಯಾರ ಕಣ್ಣಿಗೂ ಬೀಳಬಾರದೆಂಬ ಕಾರಣಕ್ಕೆ ವಕೀಲ ಕೋಟ್ ಧರಿಸಿದ್ದರು. ನ್ಯಾಯಾಧೀಶರ ಎದುರು ಹಾಜರಾದ ಆರೋಪಿಗಳು ‘ನಾವೇ ಕದಿರೇಶ್ ಕೊಲೆ ಪ್ರಕರಣದ ಆರೋಪಿಗಳು’ ಎಂದು ಹೇಳಿದ್ದರು. ಕೂಡಲೇ ಸಂಬಂಧಪಟ್ಟ ಕಾಟನ್ಪೇಟೆ ಪೊಲೀಸರಿಗೆ ಗಮನಕ್ಕೆ ತರಲಾಗಿತ್ತು. ನ್ಯಾಯಾಲಯಕ್ಕೆ ಬಂದ ಕಾಟನ್ಪೇಟೆ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ವಶಕ್ಕೆ ನೀಡಿ ಮನವಿ ಮಾಡಿಕೊಂಡರು.
ನ್ಯಾಯಾಧೀಶರು ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದರು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎಂಬುದು ವಿಚಾರಣೆ ಬಳಿಕ ತಿಳಿಯಲಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.