
ಬೆಂಗಳೂರು (ಅ. 16): ಹಿಂದೆಲ್ಲ ದೇವೇಗೌಡರು ದಿಲ್ಲಿಗೆ ಬಂದರೆಂದರೆ ಅವರ ಕಾರ್ಯದರ್ಶಿ ಶಿವಕುಮಾರ್, ಡ್ಯಾನಿಷ್ ಅಲಿ, ವಕೀಲ ಪ್ರಶಾಂತ್ ಕುಮಾರ್ ಬಿಟ್ಟರೆ ಯಾರೂ ಭೇಟಿ ಆಗಲು ಬರುತ್ತಿರಲಿಲ್ಲ. ಖಾಲಿ ಇರುತ್ತಿದ್ದ ಗೌಡರು ಕನ್ನಡದ ಪತ್ರಕರ್ತರನ್ನು ಕರೆದು ಗಂಟೆಗಟ್ಟಲೆ ಮಾತನಾಡುತ್ತಿದ್ದರು.
ಆದರೆ ಈಗ ಕುಮಾರಸ್ವಾಮಿಗಿಂತ ದೇವೇಗೌಡರು ಕರ್ನಾಟಕ ಭವನಕ್ಕೆ ಬಂದರೆಂದರೆ ಹೆಚ್ಚು ಜನ ಇರುತ್ತಾರೆ. ೪ನೇ ಮಹಡಿ ತುಂಬಿ ತುಳುಕುತ್ತಿರುತ್ತದೆ. ದಿಲ್ಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೆಲಸ ಇಲ್ಲದ ಅನೇಕ ಹಳೆಯ ಸಮಾಜವಾದಿ ಪುಢಾರಿಗಳು ಗೌಡರ ಹಿಂದೆಮುಂದೆ ಓಡಾಡುತ್ತಿರುತ್ತಾರೆ. ಬಂದವರು ಹಿಂದಿಯಲ್ಲಿ ಹೇಳಿದ್ದನ್ನು ಡ್ಯಾನಿಷ್ ಅಲಿ ಗೌಡರಿಗೆ ಇಂಗ್ಲಿಷ್ಗೆ ತರ್ಜುಮೆ ಮಾಡಿ ಹೇಳುತ್ತಿರುತ್ತಾರೆ. ಗೌಡರ ದರ್ಬಾರಿನಲ್ಲಿ ಹಾಜರಿ ಹಾಕುವ ದಿಲ್ಲಿ ಅಧಿಕಾರಿಗಳ ಸಂಖ್ಯೆಯೂ ಜಾಸ್ತಿ ಆಗಿದೆ. ಅಧಿಕಾರ ಸಿಕ್ಕರೆ ಸಾಲದು, ಚಲಾಯಿಸಲು ಬರಬೇಕು ದೇವೇಗೌಡರ ಹಾಗೆ.
ದೇವೇಗೌಡರ ಹಿಂದಿ ಶಿಕ್ಷಕ ಪತ್ರಕರ್ತ
ರಾಮಪ್ರಸಾದ್ ವೈದಿಕ್ ನೆನಪಿದೆ ತಾನೇ. ತಾನು ಮೋದಿ ಮಿತ್ರ ಎಂದು ಹೇಳಿಕೊಂಡು ಪಾಕಿಸ್ತಾನಕ್ಕೆ ಹೋಗಿ ಉಗ್ರ ಹಫೀಜ್ ಸಯೀದ್ನನ್ನು ಭೇಟಿಯಾಗಿ ವಿವಾದ ಸೃಷ್ಟಿಸಿದ್ದ ಮಹಾನುಭಾವ. ಬಿಜೆಪಿಗೆ ಹತ್ತಿರ ಇರುವ ಈ ವೈದಿಕ್ ದೇವೇಗೌಡರು ಪ್ರಧಾನಿ ಆಗಿದ್ದಾಗ ಅವರಿಗೆ ಹಿಂದಿ ಕಲಿಸಿದ ಶಿಕ್ಷಕ ಕೂಡ ಹೌದು. ಇತ್ತೀಚೆಗೆ ಅಪ್ಪ-ಮಕ್ಕಳು ಜೊತೆಗೆ ಊಟ ಮಾಡುತ್ತಿದ್ದಾಗ ಬಂದ ವೈದಿಕ್ ದೇವೇಗೌಡರನ್ನು ಹೋಗಳಿದ್ದೇ ಹೊಗಳಿದ್ದು.
ನಿಮ್ಮಂಥ ನಿರ್ಣಯ ತೆಗೆದುಕೊಳ್ಳುವ ಪ್ರಧಾನಿಯನ್ನೇ ನಾನು ನೋಡಿಲ್ಲ ಎಂದು ವೈದಿಕ್ ಅಂದಾಗ ಖುಷಿಯಾದ ಗೌಡರು ಡೈನಿಂಗ್ ಟೇಬಲ್ ಕುಟ್ಟತೊಡಗಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ಹೆಜ್ಜೆ ಮುಂದೆ ಹೋಗಿ ದೊಡ್ಡವರು ಇನ್ನೂ ಒಂದು ವರ್ಷ ಪ್ರಧಾನಿ ಆಗಿದ್ದರೆ ಕಾಶ್ಮೀರ ಸಮಸ್ಯೆಯೇ ಮುಗಿದುಹೋಗುತ್ತಿತ್ತು ಎಂದಾಗ ವೈದಿಕ ಸಹಿ ಕಹಾ ಎಂದು ದೊಡ್ಡದಾಗಿ ಹೇಳಿದರು. ದಿಲ್ಲಿ ದರ್ಬಾರ್ಗಳ ಒಳ ಹೊರಗೆ ಓಡಾಡಿದವರಿಗೆ ಕೆಲಸ ಮಾಡಿಸಿಕೊಳ್ಳಲು ಹೊಗಳಿಕೆ ಬೇಕೇಬೇಕು ಎಂದು ಬೇರೆ ಹೇಳಿಕೊಡಬೇಕೇ.
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.