
ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಆಗಮಿಸಿದ್ದ ಇಬ್ಬರು ಮುನಿಗಳು ಇಂದು ದೇಹತ್ಯಾಗ ಮಾಡಿದರು. ಓರ್ವ ಮುನಿ ಸಲ್ಲೇಖನ ವೃತ ಮಾಡಿದ್ದರೆ, ಮತ್ತೊಬ್ಬರು ಆರೋಗ್ಯದಲ್ಲಿ ಏರುಪೇರಿನಿಂದ ದೇಹತ್ಯಾಗ ಮಾಡಿದರು. ಇಬ್ಬರ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ಮಾಡಲಾಯಿತು.
ಸಲ್ಲೇಖನಾಧಾರಿ ದಿಗಂಬರ ಜೈನ ಮುನಿಯೊಬ್ಬರು ಇಂದು ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ಬೆಳಗ್ಗೆ ದೇಹತ್ಯಾಗ ಮಾಡಿದರು. ಆಚಾರ್ಯ ವಾಸುಪೂಜ್ಯ ಸಾಗರ ದಿಗಂಬರ ಮುನಿಗಳ ಸಂಘದಲ್ಲಿದ್ದ 74ವರ್ಷದ ತ್ಯಾಗಿ ಶ್ರೇಯಸಾಗರ ಮುನಿ ಸಮಾಧಿ ಮರಣ ಹೊಂದಿದರು. ಸುಮಾರು ಒಂದು ತಿಂಗಳಿನಿಂದ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿತ್ತು. ಅಲ್ಲದೆ ಆಹಾರವನ್ನು ತ್ಯಜಿಸಿದ್ದರು. ಅಂತಿಮವಾಗಿ ಸ್ವ ಇಚ್ಚೆಯಿಂದ ನೀರನ್ನೂ ತ್ಯಜಿಸಿದ್ದರು. ತ್ಯಾಗಿ ನಗರದಿಂದ ಸುಮಾರು 1 ಕಿ.ಮೀ. ವರೆಗೆ ಮೃತ ದೇಹದ ಮೆರವಣಿಗೆ ಮಾಡಲಾಯಿತು. ವಿಂದ್ಯಗಿರಿ ಬೆಟ್ಟದ ಹಿಂಭಾಗ ದಿಗಂಬರ ಜೈನ ಧರ್ಮದ ವಿಧಿ ವಿಧಾನದಂತೆ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.
ವಿಶೇಷವಾಗಿ ಶ್ರವಣಬೆಳಗೊಳಕ್ಕೆ ಬರುವ ಮುನ್ನ ಅವರು ಶ್ರವಣಬೆಳಗೊಳಲ್ಲೇ ಸಮಾಧಿ ಆಗಬೇಕೆಂಬ ಇಚ್ಚಿಸಿದ್ದರು. ಕಳೆದ ಒಂದು ವರ್ಷದಿಂದ ಶ್ರೀ ಕ್ಷೇತ್ರದಲ್ಲೇ ನೆಲೆಸಿದ್ದ ಶ್ರೇಯಸಾಗರ ದಿಗಂಬರ ಮುನಿ ಕಳೆದ ವರ್ಷ ಶ್ರವಣಬೆಳಗೊಳದಲ್ಲೇ ಚಾರ್ತುಮಾಸ ಆಚರಿಸಿದ್ದರು. ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರವಣಬೆಳಗೊಳದಲ್ಲಿ 350ಕ್ಕೂ ಹೆಚ್ಚು ದಿಗಂಬರ ಮುನಿಗಳು ವಾಸ್ತವ್ಯ ಹೂಡಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾಗಿದ್ದ ಶ್ರೇಯಸಾಗರ ದಿಗಂಬರ ಮುನಿಯಾಗಿದ್ದರು. 2 ವರ್ಷದ ಹಿಂದೆಯಷ್ಟೆ ದಿಗಂಬರ ದೀಕ್ಷೆ ಪಡೆದಿದ್ದರು. ಚಾರ್ತುಮಾಸದಲ್ಲಿ ಮೌನಸಾಧು ಎಂದೇ ಬಿಂಬಿತರಾಗಿದ್ದರು.
ಎಲ್ಲಾ ಮುನಿಗಳ ಸೇವೆಯನ್ನು ದಿಗಂಬರ ಮುನಿ ಶ್ರೇಯಸಾಗರ ಮಾಡುತ್ತಿದ್ದರು, ನಿನ್ನೆ 12 ಗಂಟೆ ವೇಳೆಯಲ್ಲಿ ವಾಸುಪೂಜ್ಯ ದಿಗಂಬರ ಮುನಿಗಳ ಬಳಿ ಸಲ್ಲೇಖನ ವ್ರತ ನೀಡುವಂತೆ ಮನವಿ ಮಾಡಿದ್ದರು. ಸಲ್ಲೇಖನ ವ್ರತ ನೀಡುವುದು ಅವರ ಸ್ವ ಇಚ್ಚೆಗೆ ಬಿಟ್ಟದ್ದು, ನಾಲ್ಕೈದು ಬಾರಿ ಮುನಿಗಳ ಸಂಘದ ಎದುರು ಕೇಳಿದ್ದರು. ಜೀವನ ಅಂತ್ಯ ಬಂದಿದೆ ಎಂದು ಮನವಿ ಮಾಡಿದ್ದರು. ಅಲ್ಲದೆ ಸಮಾಧಿಮರಣ ಹೊಂದಬೇಕು ಎಂದು ಕೇಳಿದ್ದರು. ಹೀಗಾಗಿ ನಿನ್ನೆ ಮಧ್ಯಾಹ್ನ ನಾಲ್ಕು ಪ್ರಕಾರದ ಆಹಾರವನ್ನು ತ್ಯಾಗ ಮಾಡಿ, ಜೀವನದಲ್ಲಿ ಉತ್ಕಷ್ಟ ಸಮಾಧಿ ಮರಣಕ್ಕೆ ಅವಕಾಶ ನೀಡಲಾಗಿತ್ತು. ಇಂದು ಮದ್ಯಾಹ್ನ 1.45ರ ವೇಳೆಗೆ ದೇಹತ್ಯಾಗ ಮಾಡಿದರು.
ಮಹಾಮಸ್ತಕಾಭಿಷೇಕಕ್ಕೆ ಮುಂಬೈನಿಂದ ಪಾದಯಾತ್ರೆಯಲ್ಲಿ ಬಂದಿದ್ದ ಶ್ರೀ ಅಚಲನಂದಿ ಮುನಿ ಮಹಾರಾಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಆಹಾರ ಸ್ವೀಕರಿಸಿದ್ದರು, ಮಧ್ಯಾಹ್ನದ ವೇಳೆಗೆ ಆರೋಗ್ಯದಲ್ಲಿ ಏರು ಪೇರು ಉಂಟಾಗಿತ್ತು. ಸುಮಾರು 82 ವರ್ಷ ವಯಸ್ಸಿನ ಶ್ರೀ ಅಚಲನಂದಿ ಮುನಿಮಹಾರಾಜರು ರಾಜಸ್ತಾನ ಮೂಲದವರಾಗಿದ್ದರು. ವಿಂದ್ಯಗಿರಿ ಬೆಟ್ಟದ ಹಿಂಭಾಗ ಅಂತ್ಯಸಂಸ್ಕಾರ ನಡೆಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.