ಶಿಕ್ಷೆಗೆ ಗುರಿಯಾಗಿ ರಾಜ್ಯದ ಕಾರಾಗೃಹಗಳಲ್ಲಿ ದುಡಿಮೆ ಮಾಡುತ್ತಿರುವ ಸಜಾ ಬಂದಿಗಳ ಪ್ರಸ್ತುತ ಇರುವ ವೇತನ ದುಪಟ್ಟು ಹೆಚ್ಚಳಕ್ಕೆ ರಾಜ್ಯ ಬಂದೀಖಾನೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬೆಂಗಳೂರು : ಶಿಕ್ಷೆಗೆ ಗುರಿಯಾಗಿ ರಾಜ್ಯದ ಕಾರಾಗೃಹಗಳಲ್ಲಿ ದುಡಿಮೆ ಮಾಡುತ್ತಿರುವ ಸಜಾ ಬಂದಿಗಳ ಪ್ರಸ್ತುತ ಇರುವ ವೇತನ ದುಪಟ್ಟು ಹೆಚ್ಚಳಕ್ಕೆ ರಾಜ್ಯ ಬಂದೀಖಾನೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಜೈಲು ಕಾಯ್ದೆ ಪ್ರಕಾರ ಸಜಾ ಬಂದಿಗಳು ದುಡಿಯಬೇಕಾಗುತ್ತದೆಯಾದರೂ, ಅದು ಬಲವಂತದ ದುಡಿಮೆಯಾಗಿರಬಾರದು.ಸಜಾ ಬಂದಿಗಳ ಕೆಲಸಕ್ಕೆ ಉತ್ತೇಜನ ರೂಪ ದಲ್ಲಿ ವೇತನ ನೀಡಬೇಕೆಂಬ ನಿಯಮವಿದೆ. ಪ್ರಸ್ತುತ ಕ್ರಮವಾಗಿ ಸಜಾ ಬಂದಿಗಳಿಗೆ ಮೂರು ಹಂತದಲ್ಲಿ 90, ೮೦, 70 ರು. ವೇತನ ನೀಡಲಾಗುತ್ತಿದೆ. ಈ ಪೈಕಿ 40 ಬಂದಿಗಳ ಊಟ, ಬಟ್ಟೆ, ಖರ್ಚು ಒಳಗೊಂಡು ಪ್ರತಿಯೊಬ್ಬರಿಗೂ 50, 40 ಮತ್ತು 30 ರು. ವೇತನ ಅವರ ಖಾತೆಗೆ ಜಮೆಯಾಗುತ್ತಿದೆ.
ಹೀಗಿರುವ ವೇತನ ಐದು ವರ್ಷಗಳಿಂದ ನೀಡಲಾಗುತ್ತಿದೆ. ಹೀಗಾಗಿ ಸಜಾ ಬಂದಿಗಳ ವೇತನವನ್ನು ಕ್ರಮವಾಗಿ 225, 215, 175ಕ್ಕೆ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಏನೇನು ಕೆಲಸ?: ಕೃಷಿ, ನೇಯ್ಗೆ, ಸೋಪು ತಯಾರಿಕೆ, ಬಡಗಿ, ಕಮ್ಮಾರಿಕೆ, ಬಟ್ಟೆಗೆ ರಂಗು ಹಾಕುವುದು, ಮುದ್ರಣ, ಬಟ್ಟೆ ಹೊಲಿಯುವುದು, ಪೀಠೋಪಕರಣ ತಯಾರಿಕೆ, ಬೇಕರಿ ಉತ್ಪನ್ನ ಘಟಕ, ಚರ್ಮದ ಪಾದರಕ್ಷೆ ತಯಾರಿಕೆ, ಜಮಖಾನ, ನೂಲು ಬಟ್ಟೆ, ಶಾಮಿಯಾನ ತಯಾರಿಕಾ ಕಾರ್ಖಾನೆಗಳಲ್ಲಿನ ಕೆಲಸ.
ಮೂರು ರೀತಿ: ಸಜಾ ಬಂದಿಗಳು ಕೆಲಸ ಮಾಡುವ ಹಂತವನ್ನು ಕೌಶಲ್ಯ, ಅರೆ ಕೌಶಲ್ಯ, ಕೌಶಲ್ಯ ರಹಿತ ಎಂದು 3 ಹಂತದಲ್ಲಿ ವಿಂಗಡಿಸಲಾಗಿದೆ. ಬಂದಿಗಳು ತಾವು ಹೊಂದಿರುವ ಕೆಲಸದ ಬಗ್ಗೆ ತಿಳಿದುಕೊಂಡು ಅವರನ್ನು ಆರು ತಿಂಗಳ ಕಾಲ ಅರೆಕೌಶಲ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ವೇಳೆ 80 ವೇತನ ನೀಡಲಾಗುತ್ತದೆ. 6 ತಿಂಗಳ ಬಳಿಕ ಇವರನ್ನು ಕೌಶಲ್ಯವಂತರು ಎಂದು ಗುರುತಿಸಲಾಗುತ್ತದೆ. ಇನ್ನು ವಯಸ್ಸಾದ ಹಾಗೂ ಸಣ್ಣ-ಪುಟ್ಟ ಶುಚಿತ್ವ ಕೆಲಸ ಮಾಡುವವರನ್ನು ಅರೆ ಕೌಶಲ್ಯ ಎಂದು ಗುರುತಿಸಲಾಗುತ್ತದೆ. ಕೆಲಸ ಬಾರದವರು ತಾವು ಇಚ್ಛಿಸಿದರೆ ಅವರಿಗೆ ಅವರು ಬಯಸುವ ಕೆಲಸದ ಬಗ್ಗೆ ತರಬೇತಿ ನೀಡಲಾಗುತ್ತದೆ.