ಇಂದಿರಾ ಕ್ಯಾಂಟೀನ್’ಗೆ ಇನ್ನು ಮುಂದೆ ಪೊಲೀಸರಿಂದ ಮಫ್ತಿಯಲ್ಲಿ ಕಾರ್ಯಾಚರಣೆ

By Suvarna Web DeskFirst Published Jan 24, 2018, 7:48 AM IST
Highlights

ಇಂದಿರಾ ಕ್ಯಾಂಟೀನ್‌ಗಳಲ್ಲಿ ಶುಚಿತ್ವ ಮತ್ತು ಗುಣಮಟ್ಟದ ಆಹಾರ ವಿತರಣೆ ಮಾಡಲಾಗುತ್ತಿದೆಯೇ ಎಂಬುದನ್ನು ಪತ್ತೆ ಮಾಡಲು ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗವು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ವರದಿ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು (ಜ.24): ಇಂದಿರಾ ಕ್ಯಾಂಟೀನ್‌ಗಳಲ್ಲಿ ಶುಚಿತ್ವ ಮತ್ತು ಗುಣಮಟ್ಟದ ಆಹಾರ ವಿತರಣೆ ಮಾಡಲಾಗುತ್ತಿದೆಯೇ ಎಂಬುದನ್ನು ಪತ್ತೆ ಮಾಡಲು ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗವು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ವರದಿ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಲೋಕಾಯುಕ್ತ ಪೊಲೀಸರ 28 ತಂಡವು ನಗರದ 121 ಇಂದಿರಾ ಕ್ಯಾಂಟೀನ್‌ಗಳಿಗೆ ಮಫ್ತಿಯಲ್ಲಿ ಭೇಟಿ ನೀಡಿ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅವರಿಗೆ ವರದಿ ನೀಡಲಾಗಿದೆ. ಒಟ್ಟಾರೆ ವರದಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆ ಹೊಂದಿರುವುದು, ಗುಣಮಟ್ಟ ಕಾಪಾಡುತ್ತಿರುವ ಬಗ್ಗೆ ಹೇಳಲಾಗಿದೆಯಾದರೂ ಕೆಲವು ಕ್ಯಾಂಟೀನ್‌ಗಳಲ್ಲಿ ಆಹಾರದ ಪ್ರಮಾಣ ಕಡಿಮೆ ನೀಡುತ್ತಿರುವುದು, ನಿಗದಿತ ಅವಧಿಗೆ ಆಹಾರ ಸರಬರಾಜು ಆಗದಿರುವ ಬಗ್ಗೆ ನಮೂದಿಸಲಾಗಿದೆ.

ನಾಯಂಡಹಳ್ಳಿ, ದೀಪಾಂಜಲಿನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಎಲೆಕ್ಟ್ರಿಕಲ್ ಅರ್ಥಿಂಗ್ ಸಮಸ್ಯೆ, ಶಾಂತಲಾನಗರದಲ್ಲಿ ವಿದ್ಯುತ್ ಸಮಸ್ಯೆ, ಬಿಸಿ ನೀರು ಕಾಯಿಸುವ ಪಾಯಿಂಟ್ ಇಲ್ಲದಿರುವುದು, ಸರಿಯಾದ ಸಮಯಕ್ಕೆ ಆಹಾರ ಪೂರೈಕೆ ಇಲ್ಲದಿರುವುದು, ಕುಮಾರಸ್ವಾಮಿ, ಅಂಜನಾಪುರ, ಗುರುಗುಂಟೆಪಾಳ್ಯ, ಗೊಟ್ಟಿಗೆರೆ ಸೇರಿದಂತೆ ಹಲವು ಕಡೆ ಇರುವ ಇಂದಿರಾ ಕ್ಯಾಂಟೀನ್‌ನಲ್ಲಿ ವಿವಿಧ ಸಮಸ್ಯೆಗಳಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳು ಇರುವ ಆಯಾ ಪ್ರದೇಶಗಳ ಜನರ ಬೇಡಿಕೆಗೆ ಅನುಗುಣವಾಗಿ ಕನಿಷ್ಠ 80ರಿಂದ ಗರಿಷ್ಠ 500  ಮಂದಿಗೆ ಆಹಾರವನ್ನು ವಿತರಿಸಲಾಗುತ್ತಿದೆ. ಪ್ರತಿದಿನ ವಿತರಿಸಿದ ಆಹಾರ ಮತ್ತು ಉಳಿದ ಆಹಾರದ ಲೆಕ್ಕಾಚಾರದ ಮೇಲೆ ಆಹಾರವನ್ನು ಜನರಿಗೆ ವಿತರಣೆ ಮಾಡಲಾಗುತ್ತಿದೆ. ಕೆಲವು ಕ್ಯಾಂಟೀನ್‌ಗಳಲ್ಲಿನ ಸಾರ್ವಜನಿಕರು ಇನ್ನೂ ಸ್ವಲ್ಪ ರುಚಿಯಾಗಿ ರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವೆಡೆ ಕಡಿಮೆ ಪ್ರಮಾಣದಲ್ಲಿ ಊಟ ವಿತರಿಸುತ್ತಿರುವುದನ್ನು ವರದಿಯಲ್ಲಿ ತಿಳಿಸಲಾಗಿದೆ.

click me!