
ನವದೆಹಲಿ(ಡಿ. 26): ಭಾರತದ ಗಡಿಯಲ್ಲಿ ಎಡಬಿಡದೇ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ಎರಡನೇ ಬಾರಿ ಸರ್ಜಿಕಲ್ ದಾಳಿ ನಡೆಸಲು ತಯಾರಿ ನಡೆಸಿದೆ ಎಂಬಂತಹ ವರದಿ ಝೀನ್ಯೂಸ್'ನಲ್ಲಿ ಪ್ರಸಾರವಾಗಿದೆ. ಆದರೆ, ಈ ಬಾರಿ ಅತ್ಯಾಧುನಿಕ ಹೈಟೆಕ್ ಶಸ್ತ್ರಾಸ್ತ್ರಗಳೊಂದಿಗೆ ಅತ್ಯಂತ ಪ್ರಬಲ ಕಮಾಂಡೋಗಳು ಪಾಕ್ ಗಡಿಭಾಗದೊಳಗೆ ನುಗ್ಗಿ ದಾಳಿ ನಡೆಸಲಿದ್ದಾರಂತೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಕೇಂದ್ರ ಸರಕಾರ 6 ಸಾವಿರ ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸುತ್ತಿದೆ. ಇದರಲ್ಲಿ 6 ಹೊಸ ಯುದ್ಧವಿಮಾನಗಳು ಸರ್ಜಿಕಲ್ ಸ್ಟ್ರೈಕ್'ಗೋಸ್ಕರ ಆಮದಾಗುತ್ತಿವೆ. ಅತ್ಯಾಧುನಿಕ ರೈಫಲ್, ಮೆಷೀನ್ ಗನ್, ಗ್ರಿನೇಡ್ ಲಾಂಚರ್ ಇತ್ಯಾದಿ ಶಸ್ತ್ರಗಳನ್ನು ಕೊಳ್ಳಲು ನೂರಾರು ಕೋಟಿ ಹಣವನ್ನು ಮೀಸಲಿರಿಸಲಾಗಿದೆ.
ಪಾಕ್ ವಿರುದ್ಧ ಸರ್ಜಿಕಲ್ ದಾಳಿ ನಡೆಸಲು ಈ ಶಸ್ತ್ರಾಸ್ತ್ರ ಖರೀದಿ ನಡೆಯುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸೇನೆಯಿಂದ ಯಾವುದೇ ಸ್ಪಷ್ಟನೆ ಇಲ್ಲ. ಝೀನ್ಯೂಸ್ ವರದಿಯಲ್ಲೂ ಸ್ಪಷ್ಟತೆ ಇಲ್ಲ. ಶಸ್ತ್ರಾಸ್ತ್ರ ಖರೀದಿಯು ಸೇನೆಯ ಮಾಮೂಲಿಯ ಕ್ರಮವಾಗಿರುತ್ತದೆ. ಆದರೆ, ಪದೇಪದೇ ಗಡಿಯಲ್ಲಿ ತಂಟೆ ಮಾಡುತ್ತಿರುವ ಪಾಕಿಸ್ತಾನ ವಿರುದ್ಧ ಭಾರತ ಎರಡನೇ ಬಾರಿ ಸರ್ಜಿಕಲ್ ದಾಳಿ ನಡೆಸುತ್ತದೆ ಎಂಬಂತಹ ಸುದ್ದಿ ಮಾತ್ರ ಬಲವಾಗಿ ಕೇಳಿಬರುತ್ತಿದೆ. ಆದರೆ, ಸರ್ಜಿಕಲ್ ದಾಳಿಯ ವಿಚಾರವು ಅತ್ಯಂತ ರಹಸ್ಯವಾಗಿಟ್ಟಿರಲಾಗುತ್ತದೆ. ಮಾಧ್ಯಮಗಳಿಗೆ ಈ ಮಾಹಿತಿ ಲಭಿಸಿರುವುದು ಅದರ ಸತ್ಯಾಸತ್ಯತೆಯ ಮೇಲೆ ಅನುಮಾನ ಮೂಡುವುದು ಸಹಜವೇ.
ಮೂರು ತಿಂಗಳ ಹಿಂದೆ ಸೆಪ್ಟಂಬರ್'ನಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯೊಳಗೆ ನುಗ್ಗಿ ಅಲ್ಲಿದ್ದ ಏಳು ಭಯೋತ್ಪಾದಕರ ಶಿಬಿರಗಳನ್ನು ಧ್ವಂಸ ಮಾಡಿ ಬಂದಿದ್ದರು. ಕೆಲವೇ ಗಂಟೆಗಳಲ್ಲಿ ಮುಕ್ತಾಯಗೊಂಡ ಈ ದಾಳಿಯಲ್ಲಿ ಹಲವು ಪಾಕ್ ಸೈನಿಕರು ಮತ್ತು ಉಗ್ರರು ಹತರಾಗಿದ್ದರು. ಅದಾದ ಬಳಿಕವೂ ಪಾಕಿಸ್ತಾನವು ಗಡಿತಂಟೆಯನ್ನು ಮುಂದುವರಿಸಿಕೊಂಡು ಬರುತ್ತಲೇ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.