
ಬೆಂಗಳೂರು : ಈ ವರ್ಷ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ತಯಾರಿ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವುದರಿಂದ ಮಣ್ಣಿನ ಗಣೇಶ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮುಂಗಡ ಕಾಯ್ದಿರಿಸುವವರೂ ಪರಿಸರ ಸ್ನೇಹಿತ
ಗಣಪತಿಗಳ ಮೊರೆ ಹೋಗುತ್ತಿದ್ದಾರೆ. ಇದರ ನಡುವೆಯೂ ಕೆಲ ಗಣೇಶ ಮೂರ್ತಿ ತಯಾರಿಕಾ ಮತ್ತು ಮಾರಾಟ ಮಳಿಗೆಗಳಲ್ಲಿ ಇಟ್ಟಿರುವ ಪಿಒಪಿ ಗಣೇಶಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ಜಪ್ತಿ ಮಾಡತೊಡಗಿದ್ದಾರೆ. ಇದು ಸಾರ್ವಜನಿಕರು ಪಿಒಪಿ ಗಣೇಶಗಳ ಖರೀದಿಯಿಂದ ದೂರ ಇರಿಸಲು ಮತ್ತಷ್ಟು ಕಾರಣವಾಗಿದೆ.
ನಗರದಲ್ಲಿ ಟ್ಯಾನರಿ ರಸ್ತೆಯಂತಹ ಕೆಲವೇ ಪ್ರದೇಶಗಳಲ್ಲಿ ಮಣ್ಣಿನ ಗಣೇಶ ವಿಗ್ರಹಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುತ್ತಾರೆ. ಉಳಿದಂತೆ ಶಿವಾಜಿನಗರ, ಬಾಣಸವಾಡಿ, ಮಲ್ಲೇಶ್ವರ, ಬಸವನಗುಡಿ, ಗಾಂಧಿಬಜಾರ್ ಮತ್ತಿತರೆಡೆ ಗೌರಿ-ಗಣೇಶನ ಮೂರ್ತಿಗಳನ್ನು ಸಣ್ಣ ಮಟ್ಟದಲ್ಲಿ ತಯಾರಿ ಕಾರ್ಯ ನಡೆಯುತ್ತಿದೆ. ದೊಡ್ಡ ದೊಡ್ಡ ಗಣೇಶ ಮೂರ್ತಿಗಳ ಮಾರಾಟಗಾರರು ಕೃಷ್ಣಗಿರಿಯಿಂದ ದೊಡ್ಡ ಪ್ರಮಾಣದಲ್ಲಿ ತರುತ್ತಿದ್ದಾರೆ. ಈ ಎಲ್ಲಾ ಘಟಕಗಳಿಗೆ ತೆರಳಿ ಸಾರ್ವಜನಿಕರು ಮಣ್ಣಿನ ಗಣೇಶಗಳನ್ನು ಖರೀಸಲು ಹೆಚ್ಚು ಮುಗಿ ಬೀಳುತ್ತಿದ್ದಾರೆ.
ಆರ್.ವಿ.ರಸ್ತೆ, ಮಲ್ಲೆಶ್ವರಂ, ವಸಂತನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ವಿಜಯನಗರ ಬಸ್ ಸ್ಟಾಪ್ ಬಳಿಯ ಫುಟ್ಪಾತ್ಗಳಲ್ಲಿ ಸಾಮಾನ್ಯವಾಗಿ ಗಣೇಶ ಹಬ್ಬ ಇನ್ನೂ ಎರಡು ಮೂರು ತಿಂಗಳಿರುವಾಗಲೇ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಯುದ್ದಕ್ಕೂ ದೊಡ್ಡ
ದೊಡ್ಡ ಗಣೇಶ ಮೂರ್ತಿಗಳು ರಾರಾಜಿಸುತ್ತಿದ್ದವು. ಆದರೆ ಈ ಬಾರಿ ಹಬ್ಬ ಹತ್ತಿರವಾಗುತ್ತಿದ್ದರೂ ಮೂರ್ತಿಗಳನ್ನು ರಸ್ತೆ ಬದಿ ಇಟ್ಟಿರುವುದು ಅಷ್ಟಾಗಿ ಕಂಡುಬರುತ್ತಿಲ್ಲ. ಇದಕ್ಕೆಲ್ಲ ಕಾರಣ ಪಿಓಪಿ ಗಣೇಶ್ ಮೂರ್ತಿ ತಯಾರಿಕೆ ಹಾಗೂ ಮಾರಾಟ ನಿಷೇಧ ಮಾಡಿರುವುದು. ಹೀಗಾಗಿ ನಗರದ ರಸ್ತೆ ಬದಿಗಳಲ್ಲಿ ಈ ವರ್ಷ ಗಣೇಶ ವಿಗ್ರಹಗಳು ಕಾಣಿಸುತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.