
ಕೊಚ್ಚಿ: ದೇವರ ವಿಗ್ರಹಕ್ಕೆ ರಕ್ತದ ಅಭಿಷೇಕ ಮಾಡಲು ಭಕ್ತಾದಿಗಳು ರಕ್ತದಾನ ಮಾಡುವಂತೆ ಸೂಚನೆ ನೀಡಿದ ಕೇರಳ ದೇವಸ್ಥಾನದ ಆಡಳಿತ ಮಂಡಳಿಯೊಂದು ರಾಜ್ಯ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಗ್ರಾಮೀಣ ತಿರುವನಂತಪುರದ ವಿಥುರದಲ್ಲಿರುವ ದೇವಿಯೋಡು ಶ್ರೀವಿದ್ವಾರಿ ವಿದ್ಯಾನಾಥ ದೇವಸ್ಥಾನದಲ್ಲಿ ಮಾ.11ರಿಂದ 14 ದಿನಗಳ ‘ಕಾಳಿಯುಟ್ಟು ಮಹೋತ್ಸವ’ ಹಮ್ಮಿಕೊಳ್ಳಲಾಗಿದೆ.
ಇದರ ಭಾಗವಾಗಿ ಕಾಳಿ ದೇವತೆಗೆ ರಕ್ತಾಭಿಷೇಕ ಮಾಡಲಾಗುತ್ತಿದ್ದು, ಭಕ್ತಾದಿಗಳು ರಕ್ತದಾನ ಮಾಡುವಂತೆ ಸೂಚಿಸಿ ದೇವಸ್ಥಾನದ ಆಡಳಿತ ಮಂಡಳಿ ನೋಟಿಸ್ ಅನ್ನು ಹೊರತಂದಿತ್ತು. ಅಲ್ಲದೇ, ಸರ್ಕಾರಿ ವೈದ್ಯರೇ ಭಕ್ತಾದಿಗಳಿಂದ ರಕ್ತ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ, ಇದನ್ನು ತೀವ್ರವಾಗಿ ಖಂಡಿಸಿರುವ ಕೇರಳ ಸರ್ಕಾರ, ಈ ಅನಾಗರಿಕ ಧಾರ್ಮಿಕ ಪದ್ಧತಿಯನ್ನು ಆಚರಿಸದಂತೆ ದೇವಸ್ಥಾನ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ಈ ಪದ್ಧತಿಯಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ ಎಂದು ಪೊಲೀಸರು ಮತ್ತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಕೇರಳ ದೇವಸ್ವಾಮ್ ಸಚಿವ ಕಡಕಂಪಲ್ಲಿ ಸುರೇಂದ್ರನ್ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಯಾವುದೇ ದೂರು ದಾಖಲಿಸಿಕೊಂಡಿಲ್ಲ.
ಆದರೆ, ಇಂಥ ಆಚರಣೆ ಮಾಡದಂತೆ ದೇವಸ್ಥಾನಕ್ಕೆ ಎಚ್ಚರಿಕೆ ನೀಡಿದ್ದೇವೆ. ನಮ್ಮ ಆದೇಶವನ್ನು ಪ್ರತಿರೋಧಿಸಿ, ಆಚರಣೆಗೆ ಮುಂದಾದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಕೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.