
ಬೆಂಗಳೂರು : ‘ಕರಾವಳಿಯಲ್ಲಿ ಈಗ ಗೋರಕ್ಷಕ ಗೂಂಡಾಗಳು ಹುಟ್ಟಿಕೊಂಡಿದ್ದಾರೆ. ಅಂಥವರಿಗೆ ಒಂದೊಂದು ದನ ಸಾಕಲು ನೀಡಬೇಕು. ಈ ಕೆಲಸ ಮಾಡಲು ಒಪ್ಕೋತಾರಾ?’
ಮಂಗಳವಾರ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗೋರಕ್ಷಕರನ್ನು ಟೀಕೆ ಮಾಡಿದ ಪರಿಯಿದು.
ದೇಶದಲ್ಲಿ ಪ್ರತ್ಯೇಕ ಆಹಾರ ಪದ್ಧತಿಗಳಿವೆ. ಈ ರೀತಿಯ ಕೆಲಸಗಳಿಂದ ಸಮಾಜದ ಶಾಂತಿ ಕೆಡಿಸಲು ಹೊರಡಬೇಡಿ. ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ಮಾಡಿ ಎಂದು ಕಿವಿಮಾತು ಹೇಳಿದ ಅವರು ಇವರನ್ನೆಲ್ಲ ರಾರಾಜಿಸಲು ಬಿಟ್ಟದ್ದೇ ಸರ್ಕಾರದ ದೌರ್ಬಲ್ಯ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಹರಿಹಾಯ್ದರು.
ಗೋ ರಕ್ಷಕರನ್ನು, ಕೋಮು ಸೌಹಾರ್ದತೆ ಹಾಳುಗೆಡಹುವವರನ್ನು ಹಾಗೇ ಬಿಟ್ಟದ್ದೇ ಕಾಂಗ್ರೆಸ್ ಸರ್ಕಾರದ ವೀಕ್ ನೆಸ್. ಸಮಾಜಘಾತುಕ ವಾತಾವರಣ ಹಾಳು ಮಾಡುವವರು ಎಂಪಿ, ಎಂಎಲ್ಎಗಳೇ ಇರಲಿ, ಕಠಿಣ ಕ್ರಮ ಕೈಗೊಳ್ಳಬೇಕು. ಅಂಥವರ ಮೇಲೆ ಜಾಮೀನುರಹಿತ ಮೊಕದ್ದಮೆ ದಾಖಲಿಸಲು ಸರ್ಕಾರಕ್ಕೆ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಪ್ರಾರಂಭಿಕ ಹಂತದಲ್ಲೇ ಕ್ರಮ ಕೈಗೊಳ್ಳದೆ ಸುಮ್ಮನೆ ಕೂತರೆ ಸಮಸ್ಯೆ ಬಿಗಡಾಯಿಸುತ್ತದೆ.
ನಾನು ಸಿಎಂ ಆದರೆ ಪ್ರತಿ ತಿಂಗಳು ಕರಾವಳಿಯ ಪ್ರಮುಖ ಧರ್ಮಗಳ ಮುಖಂಡರನ್ನು ಕರೆಸಿ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಇಲ್ಲಿನ ಜನರ ಆತಂಕಕ್ಕೆ ಸಂಪೂರ್ಣ ತೆರೆ ಎಳೆಯುತ್ತೇನೆ. ಹಿಂದೆ ದಲಿತ- ಸವರ್ಣೀಯರ ನಡುವೆ ಇದ್ದ ಗಲಾಟೆಯ ಸ್ಥಾನದಲ್ಲಿ ಹಿಂದೂ- ಮುಸ್ಲಿಂ ಗಲಾಟೆಯನ್ನು ರೀಪ್ಲೇಸ್ ಮಾಡಲಾಗಿದೆ.
ಇದನ್ನು ಹುಟ್ಟುಹಾಕಿದ್ದೇ ರಾಜಕೀಯ ಕಾರಣಕ್ಕೆ. ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಬೆಳೆಸಲು ಹೋಗಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಇಂಥ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.