
ಬೆಂಗಳೂರು(ಸೆ. 21): ಕಾವೇರಿ ವಿಚಾರವಾಗಿ ಇಂದು ರಾತ್ರಿ ರಾಜ್ಯ ಸರಕಾರದಿಂದ ಒಂದು ಗಟ್ಟಿ ನಿರ್ಧಾರ ಬರಬಹುದೆಂಬ ಸುಳಿವು ಸಿಕ್ಕಿದೆ. ಇಂದು ಬೆಳಗ್ಗೆ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ಎಲ್ಲ ಸಚಿವರೂ ಕಾವೇರಿ ನೀರು ಬಿಡಬಾರದು ಎಂದು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ನಮಗೆ ಕುಡಿಯಲು ನೀರಿಲ್ಲ. ಅನುಷ್ಠಾನಗೊಳ್ಳಲು ಅಸಾಧ್ಯವಾದ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ನ್ಯಾಯಾಂಗ ಉಲ್ಲಂಘನೆ ಎನಿಸುವುದಿಲ್ಲ. ಹೀಗಾಗಿ, ತಮಿಳುನಾಡಿಗೆ ನಾವು ನೀರು ಬಿಡಬಾರದು ಎಂಬ ಅಭಿಪ್ರಾಯವನ್ನು ಹಿರಿಯ ಸಚಿವರಾದ ರಮೇಶ್ ಕುಮಾರ್, ಹೆಚ್.ಕೆ.ಪಾಟೀಲ್ ಮತ್ತು ಟಿಬಿ ಜಯಚಂದ್ರ ಮೊದಲಿಗೆ ವ್ಯಕ್ತಪಡಿಸಿದರು. ಸಭೆಯಲ್ಲಿದ್ದವರೆಲ್ಲರೂ ಇದಕ್ಕೆ ಸಹಮತ ವ್ಯಕ್ತಪಡಿಸಿದರು.
ಇದಾದ ಬಳಿಕ ಸಿಎಂ ಸಿದ್ದರಾಮಯ್ಯನವರು ರಾತ್ರಿ 8ಗಂಟೆಗೆ ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಇದಕ್ಕೆ ಮುನ್ನ ಮಂತ್ರಿ ಪರಿಷತ್ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕಾಂಗ್ರೆಸ್ ಹೈಕಮಾಂಡ್'ನ ಮುಂದಿಡಲಾಗುತ್ತದೆ. ಜೊತೆಗೆ, ಕರ್ನಾಟಕದ ವಕೀಲರ ತಂಡದೊಂದಿಗೆ ಸಾಧಕ-ಬಾಧಕಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಆ ನಂತರ ಸಿಎಂ ಅವರು ವಿಪಕ್ಷ ನಾಯಕರ ಸಭೆ ನಡೆಸುತ್ತಾರೆ. ಕಾಂಗ್ರೆಸ್ ಹೈಕಮಾಂಡ್, ವಕೀಲರು ಹಾಗೂ ವಿಪಕ್ಷ ನಾಯಕರು ನೀಡುವ ಸಲಹೆಗಳನ್ನಾಧರಿಸಿ ರಾತ್ರಿ 8ಗಂಟೆಯ ವಿಶೇಷ ಸಂಪುಟ ಸಭೆಯಲ್ಲಿ ಕಾವೇರಿ ವಿಚಾರವಾಗಿ ಒಂದು ಅಂತಿಮ ನಿರ್ಧಾರಕ್ಕೆ ಸರಕಾರ ಬರಲಿದೆ ಎಂದು ಹೇಳುತ್ತಿವೆ ಮೂಲಗಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.