
ಬೆಂಗಳೂರು(ಸೆ. 05): ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಪ್ರಗತಿಪರ ಚಿಂತಕಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಅವರು ಟ್ವಿಟ್ಟರ್'ನಲ್ಲಿ ಬಹಳ ಸಕ್ರಿಯವಾಗಿದ್ದವರು. ಹತ್ಯೆಯಾದ ಇವತ್ತೂ ಕೂಡ ಗೌರಿಯವರು ಟ್ವೀಟ್ ಮಾಡಿದ್ಧಾರೆ. ನಿನ್ನೆ ರಾತ್ರಿ 3 ಗಂಟೆಗೆ ಅವರು ಎರಡು ಟ್ವೀಟ್ ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ 2 ಗಂಟೆಯವರೆಗೂ ಅವರು ರೀಟ್ವೀಟ್'ಗಳ ಮೂಲಕ ಟ್ವಿಟ್ಟರ್'ನಲ್ಲಿ ಸಕ್ರಿಯವಾಗಿದ್ದರು.
ನಿನ್ನೆ ರಾತ್ರಿ ಅವರು ಟ್ವೀಟ್ ಮಾಡಿದ ಎರಡು ಪೋಸ್ಟ್'ಗಳು ಬೇರೆಯೇ ರೀತಿಯಲ್ಲಿ ಗಮನ ಸೆಳೆಯುತ್ತವೆ. ಎಡಪಂಥೀಯರಲ್ಲಿ ಬಿರುಕು ಮೂಡಿರುವುದನ್ನು ಅವು ಸೂಚಿಸುವಂತಿವೆ. ಪರಸ್ಪರ ಕಚ್ಚಾಡೇ ಶಾಂತಿಯಿಂದ ಇರುವಂತೆ ಗೌರಿ ಲಂಕೇಶ್ ಮನವಿ ಮಾಡಿಕೊಂಡಿದ್ದಾರೆ.
ಮೊದಲ ಪೋಸ್ಟ್'ನಲ್ಲಿ ಅವರು ಪರಸ್ಪರ ಕಚ್ಚಾಟ ಬಿಟ್ಟು ಒಗ್ಗಟ್ಟಿನಿಂದ ಗುರಿ ಸಾಧಿಸುವಂತೆ ಮನವಿ ಮಾಡುತ್ತಾರೆ. "ನಮ್ಮಲ್ಲಿನ ಕೆಲವರು ನಮ್ಮನಮ್ಮಲ್ಲೇ ಕಿತ್ತಾಡಿಕೊಳ್ಳುತ್ತಿದ್ದಾರೆಂದು ನನಗೆ ಯಾಕೆ ಅನಿಸುತ್ತಿದೆ? ನಮ್ಮ ಅತಿದೊಡ್ಡ ಶತ್ರು ಯಾರೆಂದು ನಮಗೆಲ್ಲಾ ಗೊತ್ತಿದೆ. ದಯವಿಟ್ಟು ಈ ಬಗ್ಗೆ ನಾವೆಲ್ಲರೂ ಗಮನ ಹರಿಸೋಣವೇ?" ಎಂದು ಈ ಟ್ವೀಟ್'ನಲ್ಲಿ ಗೌರಿ ಲಂಕೇಶ್ ಹೇಳಿದ್ದಾರೆ.
ಕೆಲ ನಿಮಿಷಗಳ ಬಳಿಕ ಮಾಡಿದ ಇನ್ನೊಂದು ಟ್ವೀಟ್'ನಲ್ಲಿ ಅವರು ಫೇಕ್ ಪೋಸ್ಟ್'ಗಳ ಬಗ್ಗೆ ಮಾತನಾಡುತ್ತಾರೆ.
"ನಮಲ್ಲಿರುವ ಕೆಲವರು ಫೇಕ್ ಪೋಸ್ಟ್'ಗಳನ್ನು ಶೇರ್ ಮಾಡಿ ತಪ್ಪು ಮಾಡುತ್ತಾರೆ. ಈ ವಿಚಾರದಲ್ಲಿ ನಾವು ಪರಸ್ಪರ ಎಚ್ಚರಿಸೋಣ. ಆದರೆ, ಪರಸ್ಪರ ಕಾಲೆಳೆದುಕೊಳ್ಳೋದು ಬೇಡ. ಶಾಂತಿ ಇರಲಿ ಕಾಮ್ರೇಡ್ಸ್.." ಎಂದು ಗೌರಿ ಲಂಕೇಶ್ ಈ ಎರಡನೇ ಟ್ವೀಟ್'ನಲ್ಲಿ ಹೇಳಿದ್ದಾರೆ.
ಅದಾದ ನಂತರ ಗೌರಿ ಲಂಕೇಶ್ ಅವರು ಮಯನ್ಮಾರ್'ನ ರೋಹಿಂಗ್ಯ ಮುಸ್ಲಿಮ್ ನಿರಾಶ್ರಿತರ ಸಮಸ್ಯೆ ತಿಳಿಸುವ ನ್ಯೂಸ್ ಪೋಸ್ಟ್'ಗಳನ್ನು ತಮ್ಮ ಟ್ವಿಟ್ಟರ್'ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.