
ತುಮಕೂರು (ಏ.26): ಸ್ಮಾರ್ಟ್ ಸಿತಟಿಯಾಗಿ ಆಯ್ಕೆಯಾಗಿರುವ ತುಮಕೂರು ಮುಂದಿನ ಐದು ವರ್ಷಗಳಲ್ಲಿ ಏನೆಲ್ಲಾ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕೆಂಬ ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ. ಆದರೆ 1927ರಲ್ಲಿ ಗಾಂಧೀಜಿ ತಂಗಿದ್ದ ಐತಿಹಾಸಿಕ ಕಟ್ಟಡ ಪುನರುಜ್ಜೀವನಗೊಳಿಸುವ ಚಿಂತನೆಯನ್ನೇ ನಗರಾಡಳಿತ, ಜಿಲ್ಲಾಡಳಿತ, ಸ್ಮಾರ್ಟ್ಸಿಟಿ ಕಾರ್ಪೋರೇಷನ್ ಮಾಡಿಲ್ಲ.
ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಈ ಕಟ್ಟಡದ ಪಕ್ಕ ಪ್ರಥಮ ದರ್ಜೆ ಕಾಲೇಜು ತಲೆ ಎತ್ತುತ್ತಿದೆ. ಆದರೆ 90 ವರ್ಷಗಳ ಹಿಂದೆ ಹರಿಜನ ಸಭೆ ನಡೆಸಿ ತಂಗಿದ್ದ ಕೊಠಡಿಗೆ ಮಾತ್ರ ಯಾವುದೇ ಕಾಯಕಲ್ಪವಿಲ್ಲ. ಈ ಹಿಂದೆ ಕುಲಪತಿಯಾಗಿದ್ದ ಪ್ರೊ. ಓ. ಅನಂತರಾಮಯ್ಯ ಅವರು ಗಾಂಧಿ ತಂಗಿದ್ದ ಕಟ್ಟಡವನ್ನು ವಿವಿಗೆ ತೆಗೆದುಕೊಂಡು ಗಾಂಧಿ ಅಧ್ಯಯನ ಕೇಂದ್ರ ಆರಂಭಿಸುವ ಯೋಜನೆ ರೂಪಿಸಿದ್ದರು. ಅಲ್ಲದೇ ಗಾಂಧಿ ಕುಟುಂಬಸ್ಥರು ಕೂಡ ಈ ಜಾಗಕ್ಕೆ ಬಂದಿದ್ದರು. ಗಾಂಧೀಜಿಗೆ ಸಂಬಂಧಿಸಿದ ಪುಸ್ತಕಗಳು, ಗಾಂಧಿ ಬಗ್ಗೆ ಬೇರೆ ಬೇರೆಯವರು ಬರೆದ ಪುಸ್ತಕಗಳು, ಅವರು ಸಂಪಾದಿಸುತ್ತಿದ್ದ ‘ಹರಿಜನ' ಪತ್ರಿಕೆ ಸಂಚಿಕೆಗಳನ್ನು ಸಂಗ್ರಹಿಸುವ ಯೋಜನೆ ರೂಪಿಸಲಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಗಾಂಧೀಜಿ ಕುರಿತು ಡಿಜಿಟಲ್ ಲೈಬ್ರರಿ ಮಾಡಲು ಪ್ರಸ್ತಾಪನೆ ಸಿದ್ಧವಾಗಿತ್ತು. ಆದರೆ ಅದ್ಯಾಕೋ ಈ ಯೋಜನೆಗೆ ಚಾಲನೆ ಸಿಗಲೇ ಇಲ್ಲ. ಇದೇ ಸಮಯದಲ್ಲಿ ಕುಲಪತಿ ಪ್ರೊ. ಓ. ಅನಂತರಾಮಯ್ಯ ಅವರು ಸೇವೆಯಿಂದ ನಿವೃತ್ತಿಯಾದ ಬಳಿಕ ಆ ಯೋಜನೆಗೆ ಶಾಶ್ವತವಾಗಿ ಮೂಲೆ ಸೇರಿತು.
ಈಗ ಸ್ಮಾರ್ಟ್ಸಿಟಿಯಾಗಿರುವ ತುಮಕೂರಿಗೆ ಮುಂದಿನ 5 ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 1 ಸಾವಿರ ಕೋಟಿ ಬರಲಿದೆ. ಅಲ್ಲದೇ ಸ್ಥಳೀಯ ಸಂಸ್ಥೆಯಿಂದ ಸಂಗ್ರಹವಾದ ಹಣ ಸೇರಿ ಒಟ್ಟು 2 ಸಾವಿರ ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಇದರಲ್ಲಿ ಎಲ್ಲೋ ಗಾಂಧೀಜಿ ತಂಗಿದ್ದ ಕೊಠಡಿಗೆ ಕಾಯಕಲ್ಪ ಮಾಡುವ ವಿಷಯವೇ ಪ್ರಸ್ತಾಪವಾಗಿಲ್ಲ.
ಹೆಂಚುಗಳು ಒಡೆದಿತ್ತು: ಗಾಂಧಿ ತಂಗಿದ್ದ ಈ ಕೊಠಡಿಯ ಹೆಂಚುಗಳು ಕೂಡ ಒಡೆದು ಹೋಗಿತ್ತು. ಆದರೆ ಸ್ವಾತಂತ್ರ್ಯ ಹೋರಾಟಗಾರರ ನಿರಂತರ ಹೋರಾಟದಿಂದ ಕಡೆಗೂ ಜಿಲ್ಲಾಡಳಿತ ಈ ಕೊಠಡಿಗೆ ಹೊಸ ಹೆಂಚುಗಳನ್ನು ಹಾಕಿಸಿ, ಸುಣ್ಣ ಬಣ್ಣ ಬಳಿಸಿ ಸುಮ್ಮನಾದರು. ಆದರೆ ಮತ್ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡುವ ಗೋಜಿಗೆ ಹೋಗಲಿಲ್ಲ. ಈ ಕಟ್ಟಡದ ಬಾಗಿಲನ್ನು ಪ್ರತಿ ವರ್ಷ ಗಾಂಧಿ ಜಯಂತಿಯಂದು ತೆಗೆಯುತ್ತಾರೆ. ಅವತ್ತು ಗಾಂಧೀಜಿ ಫೋಟೋ ಇಟ್ಟು ಸಭೆ ನಡೆಸಿದೆ ಬಾಗಿಲು ಮುಚ್ಚಿದರೆ ಮತ್ತೆ ಕಟ್ಟಡದ ಬಾಗಿಲು ತೆರೆಯುವುದು ಮುಂದಿನ ಗಾಂಧಿ ಜಯಂತಿಯ ದಿವಸ. ಅಷ್ಟರ ಮಟ್ಟಿಗೆ ಈ ಚಾರಿತ್ರಿಕ ಕಟ್ಟಡವನ್ನು ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದೆ.
ವಿವಿ ಮುಂದೆ ಬರಲಿ: ಈಗಾಗಲೇ ವಿಶ್ವವಿದ್ಯಾಲಯ ಹಲವಾರು ಪೀಠಗಳನ್ನು ಆರಂಭಿಸಿದೆ. ಹೀಗಾಗಿ ವಿವಿಯೇ ಗಾಂಧಿ ತಂಗಿದ್ದ ಕಟ್ಟಡವನ್ನು ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಲಿ ಎಂಬುದು ಸ್ವಾತಂತ್ರ್ಯ ಹೋರಾಟಗಾರರ ಅನಿಸಿಕೆ. ವರ್ಷಕ್ಕೊಮ್ಮೆ ಮಾತ್ರ ಕೊಠಡಿ ಬಾಗಿಲು ತೆಗೆಯುವುದನ್ನು ಬಿಟ್ಟು ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಂಡು ಗಾಂಧೀಜಿ ಚಿಂತನೆಗಳನ್ನು ಮುಂದಿನ ತಲೆಮಾರಿಗೂ ತಲುಪಿಸಲಿ ಎಂಬುದು ಇವರ ಒತ್ತಾಸೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.