ಆಪರೇಷನ್ ಹಸ್ತದ ಮೂಲಕ ಬಳ್ಳಾರಿ ಬಿಜೆಪಿ ನಾಯಕರನ್ನು ಸೆಳೆಯುತ್ತಿರುವ ಕಾಂಗ್ರೆಸ್’ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಳ್ಳಾರಿಗೆ ಸದ್ದಿಲ್ಲದೇ ಕೇಂದ್ರ ಸಚಿವೆ ಸುಷ್ಮಸ್ವರಾಜ್ ಅವರನ್ನು ಕರೆ ತರುವ ಪ್ರಯತ್ನ ನಡೆದಿದೆ.
ಬಳ್ಳಾರಿ (ಫೆ.17): ಆಪರೇಷನ್ ಹಸ್ತದ ಮೂಲಕ ಬಳ್ಳಾರಿ ಬಿಜೆಪಿ ನಾಯಕರನ್ನು ಸೆಳೆಯುತ್ತಿರುವ ಕಾಂಗ್ರೆಸ್’ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಳ್ಳಾರಿಗೆ ಸದ್ದಿಲ್ಲದೇ ಕೇಂದ್ರ ಸಚಿವೆ ಸುಷ್ಮಸ್ವರಾಜ್ ಅವರನ್ನು ಕರೆ ತರುವ ಪ್ರಯತ್ನ ನಡೆದಿದೆ.
ಈಗಾಗಲೇ ಬಿಜೆಪಿ ಮುಖಂಡರೊಬ್ಬರ ಮುಂದೆ ಮುಂದಿನ ತಿಂಗಳ ಮೊದಲ ವಾರದಲ್ಲಿ ಬರುವುದಾಗಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಆದರೆ ಇದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಪ್ರತಿ ವರ್ಷ ವರ ಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಆಗಮಿಸುತ್ತಿದ್ದ ಸುಷ್ಮಾ ಸ್ವರಾಜ್ ಅವರು ಜನಾರ್ದನ ರೆಡ್ಡಿ ಜೈಲಿಗೆ ಸೇರುವ ಒಂದು ವರ್ಷ ಮುಂಚೆಯಿಂದ ಅವರು ಬಳ್ಳಾರಿಗೆ ಬರುವುದನ್ನು ಬಿಟ್ಟಿದ್ದರು. ಇದೀಗ ಅವರ ಮೂಲಕ ರಣತಂತ್ರ ರಚಿಸಲು ಬಿಜೆಪಿ ಪಾಳಯ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. ಇನ್ನೂ ಇದೇ 20 ರಂದು ಬೀದರ್ ಶ್ರೀರಂಗಪಟ್ಟಣ ಹೆದ್ದಾರಿ ಕಾಮಗಾರಿ ಉದ್ಘಾಟಿಸಲು ಕೇಂದ್ರ ಸಚಿವ ನಿತಿನ್ ಗಡ್ಗರಿ ಆಗಮಿಸಲಿದ್ದು, ಪಕ್ಷ ಸಂಘಟನೆಗೆ ಮತ್ತಷ್ಟು ಬಲ ಬರುವ ನಿರೀಕ್ಷೆ ಇದೆ.
ಮತ್ತೊಂದೆಡೆ ಮಾಜಿ ಸಚಿವ ಆನಂದ್ ಸಿಂಗ್ ಅವರನ್ನು ಕಾಂಗ್ರೆಸ್’ಗೆ ಸೇರ್ಪಡೆಗೊಂಡ ನಂತರ ಹೊಸಪೇಟೆ ಬಿಜೆಪಿಯಲ್ಲಿ ಭಾರಿ ಹಿನ್ನಡೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದ ಹೆಚ್.ಆರ್.ಗವಿಯಪ್ಪ ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾದ ನಾಯಕರು ಇದೀಗ ಅವರನ್ನು ಗೆಲ್ಲಿಸಲೇಬೆಂದು ಪಣ ತೊಟ್ಟಿದ್ದಾರೆ. ಇದಕ್ಕಾಗಿ ಈಗಾಗಲೇ ಬಿಜೆಪಿ ಮತ್ತು ಆರ್.ಎಸ್.ಎಸ್ ನ ಹಿರಿಯ ನಾಯಕರು ಕೂಡ ಗುಪ್ತ ಸಭೆಗಳನ್ನು ನಡೆಸುತ್ತಿದ್ದು, ಒಟ್ಟಾರೇ ಆನಂದ್ ಸಿಂಗ್ ಅವರನ್ನು ಸೋಲಿಸಲೇಬೇಕೆಂಧು ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.