2016ರಲ್ಲಿ ರೈತರ ಆತ್ಮಹತ್ಯೆ: ಕರ್ನಾಟಕ ದೇಶದಲ್ಲೇ ನಂ.2!

By Suvarna Web DeskFirst Published Mar 18, 2018, 9:17 AM IST
Highlights

ರೈತರ ಆತ್ಮಹತ್ಯೆ ವಿಷಯವು ಈ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ವಿಷಯವಾಗಿ ಮಾರ್ಪಟ್ಟಿರುವ ನಡುವೆಯೇ ಈ ವಿಷಯಕ್ಕೆ ಸಂಬಂಧಿಸಿದ ಆಘಾತಕಾರಿ ಅಂಕಿ-ಅಂಶಗಳು ಬಯಲಾಗಿವೆ.

ನವದೆಹಲಿ : ರೈತರ ಆತ್ಮಹತ್ಯೆ ವಿಷಯವು ಈ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ವಿಷಯವಾಗಿ ಮಾರ್ಪಟ್ಟಿರುವ ನಡುವೆಯೇ ಈ ವಿಷಯಕ್ಕೆ ಸಂಬಂಧಿಸಿದ ಆಘಾತಕಾರಿ ಅಂಕಿ-ಅಂಶಗಳು ಬಯಲಾಗಿವೆ.

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ 2016ರಲ್ಲಿ ಶೇ.32ರಷ್ಟುಏರಿಕೆಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಸ್ಥಾನ ಪಡೆದಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಶುಕ್ರವಾರ ಮಾಹಿತಿ ನೀಡಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ವರದಿ ಆಧರಿಸಿ ಈ ಅಂಕಿ ಅಂಶ ನೀಡಿದ ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌, 2016ರಲ್ಲಿ ಕರ್ನಾಟಕದಲ್ಲಿ 2079 ರೈತ ಆತ್ಮಹತ್ಯೆಗಳು ನಡೆದಿವೆ. ಇದರ ಪ್ರಮಾಣ 2015ರಲ್ಲಿ 1569 ಇತ್ತು ಎಂದು ತಿಳಿಸಿದ್ದಾರೆ. 2079ರ ಪೈಕಿ 861 ಜನ ಕೃಷಿ ಕಾರ್ಮಿಕರು. 1212 ರೈತರು ಎಂದು ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಆದರೆ ಒಟ್ಟಾರೆ ದೇಶದಲ್ಲಿ ರೈತರ ಆತ್ಮಹತ್ಯಾ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, 2016ರಲ್ಲಿ 11370 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2015ರಲ್ಲಿ ಇದರ ಪ್ರಮಾಣ 12602 ಆಗಿತ್ತು. ಒಟ್ಟಾರೆ ಶೇ.9.77ರಷ್ಟುಇಳಿದಂತಾಗಿದೆ ಎಂದು ಶಿವಸೇನಾ ಸದಸ್ಯ ಸಂಜಯ ರಾವುತ್‌ ಅವರ ಪ್ರಶ್ನೆಗೆ ರಾಧಾಮೋಹನ್‌ ಉತ್ತರಿಸಿದ್ದಾರೆ.

ಮಹಾರಾಷ್ಟ್ರ ನಂ.1: ಇದೇ ವೇಳೆ ರೈತರ ಆತ್ಮಹತ್ಯೆಯಲ್ಲಿ 2016ರಲ್ಲಿ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದ್ದು 3661 ಆತ್ಮಹತ್ಯೆಗಳು ನಡೆದಿವೆ. ಇದರಲ್ಲಿ 1111 ಕೃಷಿ ಕಾರ್ಮಿಕರು ಹಾಗೂ 2550 ರೈತರಿದ್ದಾರೆ. 2015ರಲ್ಲಿ ಇದರ ಪ್ರಮಾಣ 4291 ಆಗಿತ್ತು. 3ನೇ ಸ್ಥಾನದಲ್ಲಿ ಮಧ್ಯಪ್ರದೇಶ ಇದೆ. ಇಲ್ಲಿ 1321 ರೈತರು 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರಲ್ಲಿ 1290 ರೈತರು ಆತ್ಮಹತ್ಯೆಗೆ ಶರಣಾಗಿದ್ದರು.

click me!