
ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದೆ. ಹೀಗಿರುವಾಗ ನಿಮ್ಮ ವಾಹನದ ಪೆಟ್ರೋಲ್ ಟ್ಯಾಂಕ್ ಅಂಚಿನವರೆಗೂ ಪೆಟ್ರೋಲ್ ಅಥವಾ ಡೀಸೆಲ್ ತುಂಬದಿರಿ. ಇದರಿಂದ ವಾಹನಗಳು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಒಟ್ಟಾರೆ ಸಂದೇಶ ಹೀಗಿದೆ; ‘ಭಾರತೀಯ ತೈಲ ನಿಗಮದಿಂದ ಎಚ್ಚರಿಕೆಯ ಸಂದೇಶ. ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ವಾಹನದಲ್ಲಿ ತುಂಬಿ ತುಳುಕುವಷ್ಟು ಪೆಟ್ರೋಲ್ ತುಂಬಿಸಬೇಡಿ. ಇದರಿಂದ ವಾಹನಗಳು ಸ್ಫೋಟಗೊಳ್ಳಬಹುದು. ದಯವಿಟ್ಟು ಅರ್ಧ ಟ್ಯಾಂಕ್ ಮಾತ್ರ ತುಂಬಿಸಿ ಗಾಳಿಯಾಡಲು ಬಿಡಿ. ಅಳತೆ ಮೀರಿ ಪೆಟ್ರೋಲ್ ತುಂಬಿಸಿದ್ದರಿಂದ ಇತ್ತೀಚೆಗೆ 5 ವಾಹನಗಳು ಸ್ಫೋಟಗೊಂಡಿದ್ದು ವರದಿಯಾಗಿದೆ.
ದಿನಕ್ಕೊಂದು ಬಾರಿಯಾದರೂ ಪೆಟ್ರೋಲ್ ಟ್ಯಾಂಕ್ ತೆರೆದು ಗ್ಯಾಸ್ ಹೊರಕಳಿಸಿ’ ಎಂದು ಹೇಳಲಾಗಿದೆ. ಸದ್ಯ ಈ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಸುದ್ದಿ ನಿಜವೇ ಎಂದು ಆಲ್ಟ್ ನ್ಯೂಸ್ ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ 2015 ರಿಂದಲೇ ಈ ಸಂದೇಶ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಭಾರತೀಯ ತೈಲ ನಿಗಮವೂ ಇದೊಂದು ವದಂತಿಯಷ್ಟೇ ಎಂದು ಸ್ಪಷ್ಟೀಕರಣ ನೀಡಿದೆ. ರಾಜ್ಯ ಮಾಲಿಕತ್ವದ ಆಯಿಲ್ ಮತ್ತು ಗ್ಯಾಸ್ ಕಂಪನಿ ಈ ಬಗ್ಗೆ 2018 ರಲ್ಲಿ ಟ್ವೀಟರ್ನಲ್ಲಿ ಸ್ಪಷ್ಟೀಕರಣ ನೀಡಿದೆ. ಜೊತೆಗೆ ಟ್ಯಾಂಕ್ ಪೂರ್ತಿ ಪೆಟ್ರೋಲ್ ತುಂಬಿಸುವುದರಿಂದ ಯಾವುದೇ ತೊಂದರೆ ಇಲ್ಲವೆಂಬ ಅಭಯವನ್ನೂ ನೀಡಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.