‘ಓಪನ್‌ ಬುಕ್‌ ಎಕ್ಸಾಂ’ಗೆ ತಜ್ಞರು, ಪೋಷಕರ ವಿರೋಧ

First Published Jun 26, 2018, 8:44 AM IST
Highlights

ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ‘ಓಪನ್‌ ಬುಕ್‌ ಎಕ್ಸಾಂ’ ಪದ್ಧತಿ ಜಾರಿಗೆ ತರುವುದಾಗಿ ಹೇಳಿರುವ ಪ್ರಾಥಮಿಕ ಶಿಕ್ಷಣ ಸಚಿವ ಎನ್‌. ಮಹೇಶ್‌ ಅವರ ಹೇಳಿಕೆಗೆ ಶಿಕ್ಷಣ ತಜ್ಞರು ಹಾಗೂ ಪೋಷಕರ ವಲಯದಿಂದ ವಿರೋಧ ವ್ಯಕ್ತವಾಗಿದೆ. 

 ಬೆಂಗಳೂರು (ಜೂ. 26):  ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ‘ಓಪನ್‌ ಬುಕ್‌ ಎಕ್ಸಾಂ’ ಪದ್ಧತಿ ಜಾರಿಗೆ ತರುವುದಾಗಿ ಹೇಳಿರುವ ಪ್ರಾಥಮಿಕ ಶಿಕ್ಷಣ ಸಚಿವ ಎನ್‌. ಮಹೇಶ್‌ ಅವರ ಹೇಳಿಕೆಗೆ ಶಿಕ್ಷಣ ತಜ್ಞರು ಹಾಗೂ ಪೋಷಕರ ವಲಯದಿಂದ ವಿರೋಧ ವ್ಯಕ್ತವಾಗಿದೆ.

ಈಗಾಗಲೇ ರಾಜ್ಯದಲ್ಲಿ 8 ನೇ ತರಗತಿವರೆಗೆ ಅನುತ್ತೀರ್ಣ ಮಾಡಬಾರದು ಎಂಬ ನಿಯಮ ಜಾರಿಯಲ್ಲಿದೆ. ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ನೀತಿ ಜಾರಿಯಾದರೆ, ಕಲಿಕಾ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಪನ್‌ ಬುಕ್‌ ಎಕ್ಸಾಂ ಹಾಗೂ ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೂ ವ್ಯತ್ಯಾಸವಿಲ್ಲ. ವಿದೇಶಗಳಲ್ಲಿ ಓಪನ್‌ ಬುಕ್‌ ಎಕ್ಸಾಂ ಜಾರಿಯಲ್ಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಯೋಜನೆ ಆರಂಭಿಸಬೇಕಿದೆ. ವಿದ್ಯಾರ್ಥಿಗಳು ಪುಸ್ತಕ ನೋಡಿಕೊಂಡು ಬರೆದರೂ ಕೂಡ ಬರವಣಿಗೆ ಶೈಲಿ ಮತ್ತು ವಿಶ್ಲೇಷಣೆ ಮೇಲೆ ಪರಿಣಾಮ ಬೀರಲಿದೆ. ಶಿಕ್ಷಣದ ತಳಹದಿಯಾದ 1ರಿಂದ 5ನೇ ತರಗತಿ ಹಂತದಲ್ಲಿಯೇ ಓಪನ್‌ ಬುಕ್‌ ಎಕ್ಸಾಂ ಜಾರಿಗೊಳಿಸುವುದು ಸೂಕ್ತವಲ್ಲ ಎಂದು ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ದೇಶದ ಯಾವುದೇ ರಾಜ್ಯದಲ್ಲಿ ಈ ಪದ್ಧತಿ ಇಲ್ಲ. ಎಲ್ಲೂ ಇಲ್ಲದ ನಿಯಮವನ್ನು ನಮ್ಮ ರಾಜ್ಯದಲ್ಲಿ ಹೊಸದಾಗಿ ಪರಿಚಯಿಸುವ ಅವಶ್ಯಕತೆ ಏನಿದೆ. ಪರೀಕ್ಷೆಯಲ್ಲಿ ನಕಲು ಮಾಡಿದಾಗ ದಂಡ ವಿಧಿಸುವ ಶಿಕ್ಷಣ ಇಲಾಖೆಯೇ ಓಪನ್‌ ಬುಕ್‌ ಎಕ್ಸಾಂ ಜಾರಿಗೊಳಿಸಿದರೆ, ಕಷ್ಟಪಟ್ಟು ಓದುವ ವಿದ್ಯಾರ್ಥಿಗಳ ಕತೆ ಏನು ಎಂದು ಪೋಷಕರೊಬ್ಬರು ಪ್ರಶ್ನಿಸಿದ್ದಾರೆ. 

click me!